ಕಲಬುರ್ಗಿ : 'ಕಾಂಗ್ರೆಸ್' ನಲ್ಲಿರುವ ಕಳಂಕಿತ ಸಚಿವರನ್ನು ಸಿ.ಎಂ ಸಿದ್ದರಾಮಯ್ಯ ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಒತ್ತಾಯಿಸಿದ್ದಾರೆ.
ನ.14ರಂದು ಕಲಬುರ್ಗಿಯಲ್ಲಿ ಮಾತನಾಡಿದ ಜೋಷ್ಯಿ, ರಾಜ್ಯ ಸರ್ಕಾರದಲ್ಲಿರುವ 4 ಸಚಿವರ ಅಕ್ರಮ, ದಾಖಲೆಗಳ ಮೂಲಕ ಬಯಲಿಗೆ ಬಂದಿದ್ದರೂ ಅವರನ್ನು ಸಚಿವ ಸಂಪುಟದಲ್ಲೇ ಉಳಿಸಿಕೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರ ಕಳಂಕಿತ ಸಚಿವರನ್ನು ಸಂಪುಟದಿಂದ ಹೊರಗಿಡದೇ ಇದ್ದಲ್ಲಿ ಅವರ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.
ಗೃಹ ಸಚಿವ ಕೆ.ಜೆ ಜಾರ್ಜ್, ಲೋಕೋಪಯೋಗಿ ಸಚಿವ ಮಹದೇವ ಪ್ರಸಾದ್, ವಕ್ಫ್, ಅಲ್ಪಸಂಖ್ಯಾತ ಇಲಾಖೆ ಸಚಿವ ಖಮರುಲ್ ಇಸ್ಲಾಂ, ಅಹಾರ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ನಡೆಸಿರುವ ಅಕ್ರಮಗಳು ದಾಖಲೆ ಮೂಲಕ ಬಹಿರಂಗವಾಗಿದೆ. ಇಷ್ಟಾದರೂ ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂದು ಜೋಷಿ ಆರೋಪಿಸಿದ್ದಾರೆ.
ಅಕ್ರಮ ನಡೆಸಿರುವ ಸಚಿವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ನ.21ರಿಂದ ಡಿ.9ರ ವರೆಗೆ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುವುದಾಗಿ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ರಸ್ತೆಗಳಲ್ಲಿ ಕಂಡುಬಂದಿರುವ ಗುಂಡಿಗಳನ್ನು ಮುಚ್ಚಲು ಆರ್ಥಿಕ ಮುಗ್ಗಟ್ಟಿನ ನೆಪ ಹೇಳುತ್ತಿರುವ ಸರ್ಕಾರ, ಹಣಕಾಸಿನ ಸ್ಥಿತಿ-ಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ.