ಚೆನ್ನೈ : ಬೆಂಗಳೂರು ಮತ್ತು ಹಳೇ ಮೈಸೂರು ಭಾಗಕ್ಕೆ ಕುಡಿಯುವ ನೀರು ಪೂರೈಸಲು ಮೇಕೆದಾಟಿನ ಬಳಿ ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾಡಿದ ಘೋಷಣೆಯು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸಬೇಕು. ಇದರ ವಿರುದ್ಧ ರಾಜ್ಯವು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನ್ಯಾಯಾಧಿಕರಣದ ಮೆಟ್ಟಿಲೇರಬೇಕು. ಇದು ಉಭಯ ರಾಜ್ಯಗಳ ನಡುವಿನ ನೀರು ಹಂಚಿಕೆ ಒಪ್ಪಂದಕ್ಕೆ ವಿರೋಧವಾಗಿರುವ ಯೋಜನೆಯಾಗಿದೆ ಎಂದು ಡಿಎಂಕೆ ನಾಯಕ ಎಂ.ಕರುಣಾನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರವು ಸರ್ವಪಕ್ಷ ಸಭೆ ಕರೆಯಬೇಕು. ಬಳಿಕ ವಿಧಾನಸಭಾ ಅಧಿವೇಶನವನ್ನೂ ಕರೆದು ಇದರ ವಿರುದ್ಧ ಠರಾವು ಪಾಸು ಮಾಡಬೇಕು ಎಂದು ಆಗ್ರಹಿಸಿರುವ ಅವರು, ಯೋಜನೆಯಿಂದ ತಮಿಳುನಾಡು ಪ್ರವೇಶಿಸಲಿರುವ ಕಾವೇರಿ ನೀರಿನ ಹರಿವು ತಗ್ಗಿ, ರಾಜ್ಯಕ್ಕೆ ಅನ್ಯಾಯವಾಗಲಿದೆ. ಕರ್ನಾಟಕ ಇಂಥ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕವು ಯೋಜನೆಯನ್ನು ಕೇಂದ್ರ ಪರಿಸರ ಇಲಾಖೆ ಅನುಮೋದನೆಯೊಂದಿಗೆ ಕೈಗೆತ್ತಿಕೊಂಡಿರುವುದಾಗಿ ಹೇಳಿದೆ. ಆದರೆ ಕೇಂದ್ರ ಸರ್ಕಾರವು ತಮಿಳುನಾಡಿಗೆ ಅನ್ಯಾಯವಾಗುವಂಥ ಇಂಥ ಯೋಜನೆಗೆ ಅನುಮತಿ ನೀಡಬಾರದು ಎಂದು ಎಂಡಿಎಂಕೆ ನಾಯಕ ವೈಕೋ ಆಗ್ರಹಿಸಿದ್ದಾರೆ.