ನವದೆಹಲಿ : ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂಗ್ರೆಸ್ ಮುಂದಾಗಿದ್ದು, ನ.17ರಿಂದ ನವದೆಹಲಿಯಲ್ಲಿ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿಶ್ವದ 50ಕ್ಕೂ ಹೆಚ್ಚು ದೇಶಗಳ ಗಣ್ಯರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿಲ್ಲ. ಈ ವಿಷಯವನ್ನು ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ನ.14ರಿಂದಲೇ ನೆಹರು ಜನ್ಮದಿನಾಚರಣೆಯ ಕುರಿತು ವರ್ಷ ಪೂರ್ತಿ ನಡೆಸಲಾಗುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಚಾಲನೆ ನೀಡಲಿದೆ. ಅಂದು ದೆಹಲಿಯ ತಲಕ್ಟೋರಾ ಮೈದಾನದಲ್ಲಿ, ನೆಹರು ಕನಸುಗಳನ್ನು ನನಸು ಮಾಡುವ ಕುರಿತು ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
ವಿಶೇಷವೆಂದರೆ, ಮತ್ತೂಂದೆಡೆ ಕೇಂದ್ರ ಸರ್ಕಾರ ಕೂಡಾ, ನೆಹರು ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕಾರ್ಯಕ್ರಮದ ಕುರಿತು ಹಿಂದಿನ ಯುಪಿಎ ಸರ್ಕಾರವೇ ನಿರ್ಧಾರ ಕೈಗೊಂಡಿತ್ತಾದರೂ, ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬಂದ ಬಳಿಕ, ಸಮಿತಿಯ ಸದಸ್ಯರನ್ನು ಬದಲಾವಣೆ ಮಾಡಿತ್ತು. ಈ ಸಮಿತಿಯಲ್ಲಿ ನೆಹರು- ಗಾಂಧಿ ಮನೆತನದ ಯಾವುದೇ ಸದಸ್ಯರಿಗೂ ಸ್ಥಾನ ನೀಡಿರಲಿಲ್ಲ.