ನವದೆಹಲಿ : ಶ್ರೀಲಂಕಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮೂಲದ ಐವರು ಮೀನುಗಾರರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಮಾದಕ ವಸ್ತು ಸಾಗಾಟ ಆರೋಪದಡಿ ತಮಿಳುನಾಡಿನ ರಾಮೇಶ್ವರಂ ಮೂಲದ ಐವರು ಮೀನುಗಾರರನ್ನು ಕೊಲಂಬೋ ಹೈಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಭಾರತೀಯ ರಾಜತಾಂತ್ರಿಕ ಇಲಾಖೆ ಶ್ರಿಲಂಕಾ ಕ್ರಮವನ್ನು ಖಂಡಿಸಿತ್ತಲದೇ ಈ ಕುರಿತು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿತ್ತು.
ಅಲ್ಲದೇ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ಮಹೇಂದ ರಾಜಪಕ್ಷೆ ಜತೆ ಮೀನುಗಾರರನ್ನು ಹಸ್ತಾಂತರ ಮಾಡುವಂತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಯಶಸ್ವಿಯಾಗಿದ್ದು, ಈಗ ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಸಮ್ಮತಿಸಿದ್ದು, ಶಿಘ್ರದಲ್ಲಿಯೇ ಮೀನುಗಾರರು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.
2011ರಲ್ಲಿ ಈ ಐವರು ಮೀನುಗಾರರನ್ನು ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪದಡಿ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದರು. ಇತ್ತೀಚೆಗಷ್ಟೇ ಕೊಲಂಬೊ ಹೈಕೋರ್ಟ್ ಮೀನುಗಾರರಿಗೆ ಗಲ್ಲುಶಿಕ್ಷೆ ನೀಡಿತ್ತು.