ವಾರಾಣಸಿ : ಎರಡು ದಿನಗಳ ವಾರಾಣಸಿ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬೆಳ್ಳಂ ಬೆಳಿಗ್ಗೆ ಗಂಗಾ ನದಿ ತಟದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ವಾರಾಣಸಿಯಲ್ಲಿ ಗಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಂಗಾ ನದಿಗೆ ಆರತಿ ನೆರವೇರಿಸಿದರು. ನಂತರ ಅಲ್ಲಿಂದ ಅಸ್ಸಿ ಘಾಟ್ ಗೆ ತೆರಳಿದ ಮೋದಿ, ಅಲ್ಲಿ ಗಂಗಾ ನದಿ ತಟದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ಈ ವೇಳೆ ಮಾತನಾಡಿದ ಮೋದಿ, ಗಂಗಾ ನದಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸ್ಥಳೀಯರು ಕೂಡ ಸ್ವಚ್ಛತೆ ಭರವಸೆ ನೀಡಿದ್ದಾರೆ. 1ತಿಂಗಳಲ್ಲಿ ಅಸ್ಸಿ ಘಾಟ್ ಸಂಪುರ್ಣ ಸ್ವಚ್ಛಗೊಳ್ಳಲಿದೆ ಎಂದರು.
ಸ್ವಚ್ಛತಾ ಅಭಿಯಾನಕ್ಕಾಗಿ ಉತ್ತರ ಪ್ರದೇಶದವರೇ ಆದ 9 ಜನರ ಹೆಸರನ್ನು ನಾಮನಿರ್ದೇಶನ ಮಾಡಿದ್ದೇನೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಂಸದ ಮನೋಜ್ ತಿವಾರಿ, ದೇವಿಪ್ರಸಾದ್, ರಾಮ್ ಭದ್ರಾಚಾರ್ಯ, ಕ್ರಿಕೆಟಿಗರಾದ ಸುರೇಶ್ ರೈನಾ, ಮಹಮ್ಮದ್ ಕೈಫ್, ರಾಜು ಶ್ರೀವಾತ್ಸವ್, ಗಾಯಕ ಕೈಲಾಶ್ ಕೇರ್ ಅವರ ಹೆಸರನ್ನು ಸೂಚಿಸಿದ್ದೇನೆ. ಈ 9 ಜನರು ಮತ್ತೆ 9 ಜನರ ಹೆಸರನ್ನು ಸೂಚಿಸಲಿದ್ದಾರೆ ಎಂದು ತಿಳಿಸಿದರು.