ವಾರಾಣಸಿ : 'ವಾರಾಣಸಿ'ಯಲ್ಲಿ ನೇಕಾರರಿಗಾಗಿ ಮಾರುಕಟ್ಟೆ ಕೇಂದ್ರ ಸ್ಥಾಪನೆ ಮಾಡಲು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಜಯಪುರ ಗ್ರಾಮ ದತ್ತು ತೆಗೆದುಕೊಂಡಿದ್ದಾರೆ.
ದತ್ತು ಪಡೆದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಾರಾಣಸಿಯಲ್ಲಿ ನಾನು ಮೊದಲಿಗೆ ಕೇಳಿದ್ದು ಜಯಪುರ ಗ್ರಾಮದ ಹೆಸರು, ಆದರೆ, ನನ್ನನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಜಯಪುರದಲ್ಲಿ ದುರಂತ ಸಂಭವಿಸಿತ್ತು. ಈ ನೋವಿನ ಜೊತೆಗೆ ಈ ಗ್ರಾಮದ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇನೆ. ನಾನು ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತಿಲ್ಲ, ನೀವೆಲ್ಲರೂ ನನ್ನನ್ನು ದತ್ತು ಸ್ವೀಕರಿಸಿ ನನಗೆ ಮಾರ್ಗದರ್ಶನ ನೀಡಿ ಎಂದು ಜನತೆಯಲ್ಲಿ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಯೋಜನೆಯೊಂದನ್ನೇ ನೆಚ್ಚಿಕೊಳ್ಳದೇ ದೇಶದ ಜನತೆ ತಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ. ಗ್ರಾಮೀಣ ಭಾಗದಲ್ಲಿದ್ದ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಅವರು, ತಮ್ಮ ಮುನ್ನಡೆಗೆ ಕಾರಣವಾಗಿರುವ ಗ್ರಾಮಗಳ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ, ಪ್ರಧಾನಿಮಂತ್ರಿಯಾಗಿ ನಾವು ದೇಶಾದ್ಯಂತ ಸಂಚರಿಸುತ್ತೇವೆ, ಆದರೆ ಗ್ರಾಮೀಣ ಭಾಗದಲ್ಲಿ ಕಲಿಯುವ ಪಾಠಗಳು ಬೇರೆಲ್ಲೂ ಕಲಿಯಲು ಸಾಧ್ಯವಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನಮ್ಮ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಸ್ವಾಭಾವಿಕವಾಗಿ ನಮ್ಮ ಗ್ರಾಮ ಸ್ವಚ್ಛವಾಗುತ್ತದೆ ಎಂಬ ಭಾವನೆ ಹೋಗಬೇಕು, ಸರ್ಕಾರದೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಗ್ರಾಮದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಆಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಜಯಪುರ ಗ್ರಾಮ ಜನ್ಮ ಪಡೆದದ್ದು ಯಾವಗ ಎಂದು ತಿಳಿಯಲು ಸಾಧ್ಯವಾಗದೇ ಇದ್ದಲ್ಲಿ ನಾವೇ ಒಂದು ದಿನಾಂಕ ನಿಗದಿಪಡಿಸಿ ಗ್ರಾಮದ ಹುಟ್ಟುಹಬ್ಬವನ್ನು ಆಚರಿಸಬೇಕು, ಆಚರಣೆಯಲ್ಲಿ ಎಲ್ಲರೂ ಭಾಗವಹಿಸುವುದರಿಂದ ಜಾತಿ ಪದ್ಧತಿ ತಾನಾಗಿಯೇ ನಿರ್ಮೂಲನೆಯಾಗಲಿದೆ. ಉದ್ಯೋಗಕ್ಕಾಗಿ ಗ್ರಾಮವನ್ನು ತೊರೆದವರೂ ಆಚರಣೆಯಲ್ಲಿ ಪಾಲ್ಗೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಜಯಪುರ ಗ್ರಾಮವನ್ನು ಅಭಿವೃದ್ಧಿಪಡಿಸೋಣ ಎಂದು ಮೋದಿ ಕರೆ ನೀಡಿದ್ದಾರೆ.