ಚೆನ್ನೈ : ಚುನಾವಣೆಗಳಲ್ಲಿನ ಕಾಂಗ್ರೆಸ್ ಸತತ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಕಾಂಗ್ರೆಸ್ನಲ್ಲಿ ಬೇರೂರಿರುವ ಹೈಕಮಾಂಡ್ ಸಂಸ್ಕೃತಿ ವಿರುದ್ಧ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಗರಂ ಆಗಿದ್ದಾರೆ.
ಕೇಂದ್ರದ ಮಾಜಿ ಸಚಿವ ಜಿ.ಕೆ. ವಾಸನ್ ಅವರು ಹೊಸ ಪಕ್ಷ ಕಟ್ಟಲು ಕಾಂಗ್ರೆಸ್ಗೆ ವಿದಾಯ ಹೇಳಿದ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಘಟಕಕ್ಕೆ ಸ್ವಾಯತ್ತತೆ ನೀಡುವಂತೆ ಮತ್ತು ಎಲ್ಲ ಆದೇಶಗಳೂ ದಿಲ್ಲಿಯಿಂದಲೇ ಆಗಬೇಕು ಎಂಬ ಪದ್ಧತಿಯನ್ನು ಕೈಬಿಡುವಂತೆ ಕಾರ್ತಿ ಆಗ್ರಹಿಸಿದ್ದಾರೆ.
ಮಾತ್ರವಲ್ಲ ಪಕ್ಷದ ನಾಯಕರಲ್ಲಿ ತಮ್ಮನ್ನು ಕಡೆಗಣಿಸಿದ ಭಾವನೆ ವ್ಯಕ್ತವಾಗುತ್ತಿದೆ, ಇದಕ್ಕೆ ಈಗಿರುವ ವ್ಯವಸ್ಥೆಯೇ ಕಾರಣ ಎಂದು ಕಿಡಿಕಾರಿದ್ದಾರೆ.
ಆಂಗ್ಲ ದೈನಿಕವೊಂದಕ್ಕೆ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ, ಕೇರಳದಲ್ಲಿ ಪಕ್ಷದ ನಾಯಕರು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ದೆಹಲಿಯಲ್ಲಿನ ನಾಯಕರಿಗೆ ಮಾಹಿತಿ ನೀಡಿ ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಕೇರಳದಲ್ಲೂ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ. ಹಾಗಂತ ಅವರು ಪಕ್ಷಕ್ಕೆ ಸಂಬಂಧಿಸಿದ ರಾಜ್ಯದ ವ್ಯವಹಾರಗಳಲ್ಲಿ ಎಐಸಿಸಿ ವೀಕ್ಷಕರು ಮೂಗು ತೂರಿಸಲು ಬಿಡುವುದಿಲ್ಲ. ಅದೇ ರೀತಿ ತಮಿಳುನಾಡು ಘಟಕಕ್ಕೂ ಸ್ವಾಯತ್ತತೆ ನೀಡುವಂತೆ ಹೈಕಮಾಂಡನ್ನು ಒಗ್ಗೂಡಿ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪಕ್ಷದ ನಾಯಕರಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ಮೂಡಿದರೆ ಅದಕ್ಕೆ ಈಗಿರುವ ವ್ಯವಸ್ಥೆಯೇ ಕಾರಣ ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ನ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿರುವವರು ಪಕ್ಷ ತೊರೆಯಲು ಸ್ವತಂತ್ರರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.