ನವದೆಹಲಿ : ನಷ್ಟದಲ್ಲಿ ನಡೆಯುತ್ತಿರುವ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬುಧವಾರ, ನ.೫ರಂದು ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಜೇಟ್ಲಿ, 'ಕಳೆದ ಕೆಲ ವರ್ಷಗಳಿಂದ ನಿಶ್ಚಲತೆ ಕಂಡಿರುವ ಭಾರತೀಯ ಆರ್ಥಿಕತೆಯನ್ನು ಸುಧಾರಿಸಲು ಕೆಲವು ಅಭಿವೃದ್ದಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ, ಈ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ' ಎಂದು ಘೋಷಿಸಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿರಲಿಲ್ಲ. ಪ್ರಸ್ತುತ ಆರ್ಥಿಕ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಸರಿಸಿದ್ದ ಕೆಲ ಆರ್ಥಿಕ ನೀತಿಗಳು ಅಡ್ಡಿ ಉಂಟುಮಾಡುತ್ತಿವೆ. ಆದರೆ ವಿಶ್ವಮಟ್ಟದಲ್ಲಿ ಭಾರತ ಹೂಡಿಕೆ ಸ್ಥಾನದಲ್ಲಿ ಮತ್ತೆ ಮಿಂಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತೆರಿಗೆ ನೀತಿಯಲ್ಲಿನ ಕೆಲ ಅಂಶಗಳು ಅಭಿವೃದ್ದಿಗೆ ಮಾರಕವಾಗಿದ್ದು, ಈ ನಿಟ್ಟಿನಲ್ಲಿ ದೇಶದ ತೆರಿಗೆ ನೀತಿಯಲ್ಲಿ ಕೆಲವು ಬದಲಾವಣೆ ತರುವ ಅವಶ್ಯಕತೆಯಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಮೂರು ದಿನಗಳು ನಡೆಯುವ ಈ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿವೆ. ಉದ್ಯಮಿಗಳು, ಹೂಡಿದಾರರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 700ಕ್ಕೂ ಅಧಿಕ ಮಂದಿ ನಾಯಕರು ಸಮಿತಿಯಲ್ಲಿ ಉಪಸ್ಥಿತರಿದ್ದಾರೆ.
ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ಹೆಚ್.ಎಂ.ಟಿ ವಾಚ್ ಕಂಪನಿಗೆ ಬೀಗ ಜಡಿಯಲು ಸರ್ಕಾರ ನಿರ್ಧರಿಸಿದೆ. ಹೆಚ್.ಎಂ.ಟಿ ಯಂತೆಯೇ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದು ಕಾಲದಲ್ಲಿ ದೇಶದ ಹೆಮ್ಮೆಯ ಐಕಾನ್ ಗಳಾಗಿದ್ದ ಕಂಪನಿಗಳನ್ನು ಮುಚ್ಚುವ ಬದಲು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸುವಂತಿದೆ.