ಚೆನ್ನೈ : 'ಕಾಂಗ್ರೆಸ್' ನಲ್ಲಿ ಬದಲಾವಣೆ ಪರ್ವ ಸ್ಪಷ್ಟವಾಗಿ ಕಾಣುತ್ತಿದೆ. ಇಷ್ಟು ದಿನ ರಾಜ್ಯ ಕಾಂಗ್ರೆಸ್ಸಿಗರನ್ನು ಹೈಕಮಾಂಡ್ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿತ್ತು. ಆದರೆ ಮೇ 2014ರ ಲೋಕಸಭಾ ಚುನಾವಣೆ ಹಾಗೂ ಆ ನಂತರದ ವಿಧಾನಸಭಾ ಚುನಾವಣೆಗಳ ಸರಣಿ ಸೋಲಿನ ಪರಿಣಾಮ ಇದೀಗ ರಾಜ್ಯ ಕಾಂಗ್ರೆಸ್ಸಿಗರೇ ಹೈಕಮಾಂಡ್ ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ತಮಿಳುನಾಡಿನಲ್ಲಂತೂ ಕಾಂಗ್ರೆಸ್ ನ ಪರಿಸ್ಥಿತಿ ಶೋಚನೀಯವಾಗಿದೆ. ಮಾಜಿ ಕೇಂದ್ರ ಸಚಿವ ಜಿ.ಕೆ ವಾಸನ್ ಅವರು ಪಕ್ಷ ತೊರೆದ ನಂತರ ಹಿರಿಯರು, ಕಿರಿಯರೆಂಬ ಬೇಧವಿಲ್ಲದೇ ಎಲ್ಲರೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಅವರ ಸರದಿ.
ತಮಿಳುನಾಡು ಕಾಂಗ್ರೆಸ್ ನಲ್ಲಿ ಭಿನ್ನಮತ ಕಾಣಿಸಿಕೊಂಡಿರುವುದಕ್ಕೆ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾರ್ತಿ ಚಿದಂಬರಂ, ಹಿರಿಯರೆಲ್ಲರೂ ಪಕ್ಷ ತ್ಯಜಿಸುತ್ತಿದ್ದಾರೆ ಎಂದರೆ ಪಕ್ಷದಲ್ಲೇ ಏನೋ ಸಮಸ್ಯೆ ಇದೆ ಎಂದು ಅರ್ಥ. ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿ ಬಾರಿಯೂ ಹೈಕಮಾಂಡ್ ನಿರ್ದೇಶನದಂತೆ ನಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ವರಿಷ್ಠರು ಸ್ಪಷ್ಟನೆ ನೀಡದೇ ಇದ್ದಲ್ಲಿ ಪಕ್ಷದ ಬೆಳವಣಿಗೆ ಅಸಾಧ್ಯ ಎಂದು ಕಾರ್ತಿ ಅಭಿಪ್ರಯಪಟ್ಟಿದ್ದಾರೆ.
ಅಂತೂ ಪಕ್ಷದಲ್ಲಿನ ಭಿನ್ನಮತ ಹೈಕಮಾಂಡಿಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು, ಈ ಎಲ್ಲ ಬೆಳವಣಿಗೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ದಾರಿ ಮಾಡಿಕೊಡುತ್ತಿದೆಯೇನೋ ಎಂಬಂತಾಗಿದೆ.