ರಾಲೇಗಣ್ ಸಿದ್ದಿ : 'ಕಪ್ಪುಹಣ' ವಾಪಸ್ ತರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಸುಳ್ಳಾದರೆ ದೇಶಾದ್ಯಂತ ಮತ್ತೆ ಚಳುವಳಿ ಪ್ರಾರಂಭ ಮಾಡುತ್ತೇನೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.
ಕಪ್ಪುಹಣ ಹೊಂದಿರುವವರ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ತಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದರೆ 100 ದಿನಗಳಲ್ಲಿ ಕಪ್ಪುಹಣ ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಆದರೆ 150 ದಿನಗಳು ಕಳೆದರೂ ವಾಪಸ್ ತಂದಿಲ್ಲ.
ಕಪ್ಪುಹಣ ಹೊಂದಿರುವವರ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿರುವುದು ಉತ್ತಮ ಬೆಳವಣಿಗೆ. ಎಲ್ಲಾ ಹೆಸರುಗಳನ್ನು ಬಹಿರಂಗಗೊಳಿಸಿದರೆ, ದೇಶದ ಜನತೆಗೆ ಸರ್ಕಾರದ ಮೇಲೆ ನಂಬಿಕೆ ಬರುತ್ತದೆ ಆದರೆ ಮೋದಿ ಸರ್ಕಾರ ಕಪ್ಪುಹಣ ವಾಪಸ್ ತರದೇ ಇದ್ದರೆ ದೇಶಾದ್ಯಂತ ಮತ್ತೆ ಚಳುವಳಿ ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ.
ಮುಚ್ಚಿದ ಲಕೋಟೆಯಲ್ಲಿ ಕಪ್ಪುಹಣ ಹೊಂದಿರುವವರ ಬಗ್ಗೆ ಮಾಹಿತಿ ನೀಡಿರುವುದಕ್ಕೆ ದೇಶಾದ್ಯಂತ ಹಲವು ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿರುವವರನ್ನು ಕಾಪಾಡಬಾರದು. ಅವರ ಹೆಸರನ್ನು ಬಹಿರಂಗಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.