BW News Bureau : ಕರ್ನಾಟಕದಲ್ಲಿ ತಂಬಾಕು ಸಂಬಂಧಿ ರೋಗಗಳಿಂದಾಗುತ್ತಿರುವ ಆರ್ಥಿಕ ಹೊರೆ ಕುರಿತ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಈ ವರದಿ ಸಿದ್ಧಪಡಿಸಲಾಗಿದೆ.
ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ತಂಬಾಕು ಸಂಬಂಧಿ ರೋಗಗಳಿಂದ ಹೃದಯ ಸಂಬಂಧಿ ರೋಗಗಳು, ಕ್ಯಾನ್ಸರ್, ಉಸಿರಾಟದ ತೊಂದರೆ, ಅಸ್ತಮಾ ಕಾಯಿಲೆಗಳು ಬರುತ್ತವೆ. ಈ ರೋಗಗಳು ಬರದಂತೆ ತಡೆಗಟ್ಟುವುದೇ ಮುಖ್ಯವಾದ ಕೆಲಸವಾಗಬೇಕು. ರೋಗ ಬಂದ ನಂತರ ಕಾಯಿಲೆ ಗುಣಪಡಿಸುವುದು ತುಂಬಾ ಕಷ್ಟ ಎಂದರು.
ಕರ್ನಾಟಕ ರಾಜ್ಯವೊಂದರಲ್ಲೇ ಪ್ರತಿ ವರ್ಷ ಇಂತಹ ಕಾಯಿಲೆಗಳಿಗೆ 983 ಕೋಟಿ ರೂ. ವೆಚ್ಚವಾಗುತ್ತಿದೆ. 35 ರಿಂದ 69ರ ವಯೋಮಾನದವರ ಚಿಕಿತ್ಸೆಗಾಗಿ ಶೇ. 73ರಷ್ಟು ಹಣ ಖರ್ಚಾಗಿದೆ. ಜನರಲ್ಲಿ ಈ ರೋಗ ಬರದಂತೆ ಜಾಗೃತಿ ಮೂಡಿಸುವುದು ಅತಿ ಮುಖ್ಯ. ಸರ್ಕಾರ ಗುಟ್ಕಾವನ್ನು ನಿಷೇಧಿಸಿದ್ದರೂ, ತಂಬಾಕು ಮತ್ತು ಸಿಗರೇಟ್ ಸೇವನೆ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿದೆ. ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.