ನವದೆಹಲಿ : ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ ಎಲ್ಲಾ ಖಾತೆದಾರರ ಹೆಸರನ್ನೂ ಬಹಿರಂಗ ಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಕಪ್ಪುಹಣ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಜೆ ಹೆಚ್.ಎಲ್.ದತ್ತು ಈ ಆದೇಶ ನೀಡಿದ್ದು, ನಾಳೆಯೊಳಗೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣವಿಟ್ಟಿರುವ ಎಲ್ಲಾ ಭಾರತೀಯ ಖಾತೆದಾರರ ಹೆಸರನ್ನು ಬಹಿರಂಗ ಪಡಿಸಿ ಮಾಹಿತಿ ನೀಡಬೇಕೆಂದು ಒಂದುದಿನದ ಗಡುವು ನೀಡಿ ಖಡಕ್ ಸೂಚನೆ ನೀಡಿದ್ದಾರೆ.
ಖಾತೆದಾರರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿಟ್ಟು, ಎಸ್.ಐ.ಟಿಗೆ ಮಾಹಿತಿ ನೀಡಬೇಕು. ಕಪ್ಪುಹಣದ ಖಾತೆದಾರರ ಬಗ್ಗೆ ಖುದ್ದಾಗಿ ನಾವೇ ತನಿಖೆ ನಡೆಸುವುದಾಗಿ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ತಿಳಿಸಿದೆ.
ಅ.27ರಂದು ಕೇಂದ್ರ ಸರ್ಕಾರ ವಿದೇಶದಲ್ಲಿಟ್ತುರುವ ಕಪ್ಪುಹಣದ ಮೂವರು ಖಾತೆದಾರರ ಹೆಸರನ್ನು ಬಹಿರಂಗಪಡಿಸಿತ್ತು. ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸಲ್ಲಿಸಿದ ಅಫಿಡವಿಟ್ ನಲ್ಲಿ ಡಾಬರ್ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರದೀಪ್ ಬರ್ಮನ್, ಗೋವಾದ ಮೈನಿಂಗ್ ಕಂಪನಿ ಮುಖ್ಯಸ್ಥೆ ರಾಧಾ ಎಸ್ ಟಿಂಬ್ಲೋ ಹಾಗೂ ರಾಜ್ ಕೋಟ್ ಮೂಲದ ಚಿನ್ನದ ವ್ಯಾಪಾರಿ ಪಂಕಜ್ ಚಿಮನ್ ಲಾಲ್ ಹೆಸರುಗಳನ್ನು ಬಹಿರಂಗಪಡಿಸಲಾಗಿತ್ತು.