ಹೈದ್ರಾಬಾದ್ : ಹುಡ್ ಹುಡ್ ಚಂಡಮಾರುತವಾಯ್ತು ಈಗ ನಿಲೋಫರ್ ಚಂಡಮಾರುತದ ಭೀತಿ ದೇಶಕ್ಕೆ ಆವರಿಸಿದೆ. ದೇಶದ ಪಶ್ಚಿಮ ಕರಾವಳಿಗೆ ನಿಲೋಫರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಚಂಡಮಾರುತದ ಸ್ವರೂಪ ಪಡೆದು ಗುಜರಾತ್ ನ ಕರಾವಳಿಯಲ್ಲಿ ಕಛ್ ಗೆ ಅಪ್ಪಳಿಸುವ ಸಂಭವವಿದೆ ಎಂದು ಹವಾಮನಾ ಇಲಾಖೆ ತಿಳಿಸಿದೆ.
ಹಿಂಗಾರು ಮಳೆಯ ಅಬ್ಬರ ಅನುಭವಿಸುತ್ತಿರುವ ಕರ್ನಾಟಕ , ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಈ ಚಂಡಮಾರುತದ ಪರಿಣಾಮ ಮುಂದಿನ ಎರಡುದಿನಗಳವರೆಗೆ ಭಾರಿ ಮಳೆಯಾಗಾಲಿದೆ.
ಮುಂಬೈ ಕರಾವಳಿಯ 1400 ಕಿ.ಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಅದು ಪಶ್ಚಿಮ ದಿಕ್ಕಿನಲ್ಲಿ ಸಾಗುತ್ತಿದೆ. ಅದು ಯಾವರೂಪದ ಚಂಡಮಾರುತವಾಗಿ ಬದಲಾಗಲಿದೆ ಎಂಬುದು ಕರಾವಳಿಗೆ ಹತ್ತಿರವಾದಾಗ ಅಂದರೆ ಅ.27ರಂದು ಗೊತ್ತಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹೈದ್ರಾಬಾದ್ ಘಟಕ ನಿರ್ದೇಶಕ ಕೆ.ಸೀತಾರಾಂ ತಿಳಿಸಿದ್ದಾರೆ.
ಒಂದುವೇಳೆ ಈ ಚಂಡಮಾರುತ ಉತ್ತರ ದಿಕ್ಕಿನತ್ತ ಸಾಗಿದಿರೆ ಅದು ನೇರವಾಗಿ ಗುಜರಾತ್ ನ ಕಛ್ ಜಿಲ್ಲೆ, ಪಶ್ಚಿಮ ಕರಾವಳಿಯ ಇನ್ನಿತರ ಭಾಗ ಮತ್ತು ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸಲಿದೆ. ಒಂದು ವೇಳೆ ಚಂಡಮಾರುತ ಪಶ್ಚಿಮದತ್ತ ಸಾಗಿದರೆ ಒಮಾನ್ ಗೆ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.