ನವದೆಹಲಿ : 'ಕಪ್ಪುಹಣ' ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರಿದ್ದರೆ ಪಕ್ಷಕ್ಕೆ ಮುಜುಗರ ಉಂಟಾಗುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಚಿದಂಬರಂ, ಸರ್ಕಾರ ಕಪ್ಪುಹಣ ಹೊಂದಿರುವವರ ಪಟ್ಟಿ ಬಿಡುಗಡೆ ಮಾಡಿದರೆ ಪಟ್ಟಿಯಲ್ಲಿರುವ ಹೆಸರಿನವರು ಮುಜುಗರ ಪಡಬೇಕು ಹೊರತು, ಪಕ್ಷವಲ್ಲ ಎಂದು ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ.
ಶಿಘ್ರದಲ್ಲೆ ವಿದೇಶದಲ್ಲಿ ಕಪ್ಪುಹಣ ಹೊಂದಿರುವವರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಅಲ್ಲದೇ ಪಟ್ಟಿ ಬಿಡುಗಡೆ ಮಾಡಿದರೆ ಮುಜುಗರ ಉಂಟಾಗುವುದು ಕಾಂಗ್ರೆಸ್ ಪಕ್ಷಕ್ಕೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಚಿದಂಬರಂ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಈ ರೀತಿ ಹೇಳಿಕೆಗಳನ್ನು ನೀಡುವ ಬದಲು ಶೀಘ್ರದಲ್ಲೇ ಕಪ್ಪುಹಣ ಹೊಂದಿರುವವರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಲಿ. ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಇದ್ದರೆ ಪಕ್ಷಕ್ಕೇನು ಮುಜುಗರವಾಗುವುದಿಲ್ಲ. ಏಕೆಂದರೆ ಅದು ವೈಯಕ್ತಿಕ ವಿಚಾರವಾಗಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಚಿದಂಬರಂ ಸಲಹೆ ನೀಡಿದ್ದಾರೆ.