ಬೆಂಗಳೂರು : ರಾಜ್ಯಾದ್ಯಂತ, ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಬೆಸ್ಕಾಂ ಮಾತ್ರ 8 ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಿ ದೀಪಾವಳಿ ಹಬ್ಬದ ಸಂದೇಶಕ್ಕೇ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ದೀಪಾವಳಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗಟ್ಟಲೇ ವಿದ್ಯುತ್ ತೆಗೆಯುತ್ತಿರುವ ಕ್ರಮಕ್ಕೆ ಜನರು ಬೆಸ್ಕಾಂ ಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮಹಾನಗರದಲ್ಲಿ ದಿನ 24 ಗಂಟೆಗಳೂ ವಿದ್ಯುತ್ ಪೂರೈಸುವುದಾಗಿ ಹೇಳಿರುವ ಬೆಸ್ಕಾಂ ಸದ್ದಿಲ್ಲದೆ 'ಪೀಕ್ ಅವರ್' ನಲ್ಲೇ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಈ ಮೂಲಕ ರಾಜ್ಯ ವಿದ್ಯುತ್ ನಿಯಂತ್ರಣ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಕೆಂಗಣ್ಣಿಗೆ ಗುರಿಯಾಗುತ್ತಿದೆ.
ಪೀಕ್ ಅವರ್ನಲ್ಲಿ ವಿದ್ಯುತ್ ಬೇಡಿಕೆ 3,800 ಮೆ.ವ್ಯಾ. ಇದೆ. ಎಲ್ಲೆಡೆ ಉತ್ತಮ ಮಳೆಯಾಗಿರುವುದರಿಂದ ವಿದ್ಯುತ್ ಪೂರೈಕೆ ಕೂಡಾ 3,800 ಮೆ.ವ್ಯಾ.ನಷ್ಟೇ ಇದೆ. ಹಾಗಿದ್ದರೂ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ.
ವಾರದ ಹಿಂದೆಯಷ್ಟೇ ದಿಢೀರ್ ಲೋಡ್ ಶೆಡ್ಡಿಂಗ್ ಹೇರುವುದಾಗಿ ಹೇಳಿದ್ದ ಇಂಧನ ಇಲಾಖೆ ಲೋಡ್ ಶೆಡ್ಡಿಂಗ್ ನಿರ್ಧಾರವನ್ನು 3 ದಿನಗಳಲ್ಲಿ ವಾಪಸ್ ತೆಗೆದುಕೊಂಡಿತು. ಆದರೂ, ದಿನಕ್ಕೆ 2 ರಿಂದ 3 ಗಂಟೆ ಅಘೋಷಿತ, ಅನಧಿಕೃತ ಲೋಡ್ ಶೆಡ್ಡಿಂಗ್ ವಿಧಿಸಲಾಗುತ್ತಿದೆ. ಇದರಿಂದಾಗಿ ರಾಜರಾಜೇಶ್ವರಿನಗರ, ಹನುಮಂತನಗರ, ಕತ್ರಿಗುಪ್ಪೆ, ಶ್ರೀನಗರ ಸೇರಿದಂತೆ ಬೆಂಗಳೂರು ದಕ್ಷಿಣದಲ್ಲಿ 2 ಗಂಟೆ ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ. ಅದೇ ರೀತಿ ಬಾಣಸವಾಡಿ, ಕಗ್ಗದಾಸಪುರ, ಎಚ್ಎಎಲ್, ಮರುತ್ಹಳ್ಳಿ, ಅಗರ, ಮಹಾದೇವಪುರ, ಜೆ.ಪಿ.ನಗರ ಮತ್ತು ಕೊತ್ತನೂರು ಪ್ರದೇಶಗಳು ತೊಂದರೆಗೀಡಾಗಿವೆ.