ನವದೆಹಲಿ : ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ 139ನೇ ಜನ್ಮದಿನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಏಕ್ತಾ ದಿನವನ್ನಾಗಿ(ಯೂನಿಟಿ ಡೇ)ಆಚರಿಸಲು ನಿರ್ಧರಿಸಿದೆ.
ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಅ.31ರಂದು ದೇಶಾದ್ಯಂತ ರನ್ ಫಾರ್ ಯೂನಿಟಿ, (ಏಕತೆಗಾಗಿ ಓಟ) ನಡೆಯಲಿದೆ. ದೇಶಕ್ಕೆ ಸ್ವಾತಂತ್ರ ಬಂದ ನಂತರ 554 ಸ್ವತಂತ್ರ ಪ್ರಾಂತ್ಯಗಳನ್ನು ಭಾರತದೊಂದಿಗೆ ವಿಲೀನ ಮಾಡುವ ಮೂಲಕ ಸರ್ದಾರ್ ಪಟೇಲರು ಭಾರಕ್ಕೆ ಅಸ್ಥಿತ್ವ ನೀಡಿದರು.
ಹೈದರಾಬಾದನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಒಪ್ಪದ ನಿಜಾಮರ ವಿರುದ್ಧ 1948, ಸೆಪ್ಟೆಂಬರ್ 13ರಂದು ಆಪರೇಷನ್ ಪೋಲೋ ಕಾರ್ಯಾಚರಣೆ ನಡೆಸಿ, ಸ್ವತಂತ್ರ ಪ್ರಾಂತ್ಯವಾಗಿದ್ದ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಿದ್ದು ರಾಷ್ಟ್ರೀಯವಾದಿಯಾಗಿದ್ದ ಪಟೇಲರ ಮಹತ್ತರ ಸಾಧನೆ. ಅಂತೆಯೇ ದೇಶವೇ ಮೊದಲೆಂಬ ಸಿದ್ಧಾಂತ ಹೊಂದಿದ್ದ ಸರ್ದಾರ್ ಪಟೇಲರು ಉಕ್ಕಿನ ಮನುಷ್ಯ ಎಂದೇ ಖ್ಯಾತಿಪಡೆದರು.
ಸರ್ದಾರ್ ಪಟೇಲ್ ಅವರ ಜನ್ಮ ಭೂಮಿ ಗುಜರಾತ್ ನಲ್ಲಿ ಅಲ್ಲಿನ ಸರ್ಕಾರ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಲೋಹದ ಪ್ರತಿಮೆ(182-metre) ನಿರ್ಮಾಣ ಮಾಡುತ್ತಿದೆ.