ಕೊಪ್ಪಳ : ಕಾಂಗ್ರೆಸ್ ನಿಂದ ಕತ್ತೆ ಸ್ಪರ್ಧಿಸಿದರೂ 25,000 ಮತ ಬರುವುದು ಖಚಿತ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಪ್ರತಿಕ್ರಿಯಿಸಿ, ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದರು.
ಸೂರ್ಯ ಚಂದ್ರರಿರುವವರೆಗೂ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ಮುಕ್ತ ಭಾರತ ನಿರ್ಮಿಸುವುದೇ ನಮ್ಮ ಕನಸು. ಯಾರೂ ಕಾಂಗ್ರೆಸ್ ಗೆ ನೀತಿ ಪಾಠ ಹೇಳುವ ಗತ್ಯವಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ರಾಹುಲ್ ಗಾಂಧಿ ಹಠಾವೋ ಪ್ರಶ್ನೆಯೇ ಇಲ್ಲ. ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ, ರಾಜ್ಯದಲ್ಲಿ ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷಕ್ಕೇ ಬಹುಮತ ಸಿಗುವುದು ಖಚಿತ. ಕಾಂಗ್ರೆಸ್ ನಿಂದ ಕತ್ತೆ ಸ್ಪರ್ಧಿಸಿದರೂ 25 ಸಾವಿರ ಮತಗಳು ಬರುತ್ತವೆ ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರ ಸವಲತ್ತುಗಳನ್ನು ನೀಡುತ್ತಿದ್ದರೂ ಜನರು ಗುಳೆ ಹೋಗುತ್ತಿರುವುದು ಯಾಕೆ ಎಂದು ಪ್ರಶ್ನಿಸಿರುವ ಹೆಚ್.ಆಂಜನೇಯ, ಶೋಕಿಗಾಗಿ ಜನರು ಗುಳೆ ಹೋಗುತ್ತಿದ್ದಾರೆ ಹೊರತು ದುಡಿಯುವ ಸಲುವಾಗಿ ಗುಳೆ ಹೋಗುತ್ತಿಲ್ಲ ಎಂದು ಹೇಳುವ ಮೂಲಕ ಸಮಾಜ ಕಲ್ಯಾಣ ಸಚಿವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.