ಬೆಂಗಳೂರು : ಕಳೆದ 21 ದಿನಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಬಿಡುಗಡೆಗೊಂಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮಧ್ಯಾಹ್ನ 3:15ರ ವೇಳೆ ಜಯಲಲಿತಾ ಹಾಗೂ ಅವರ ದತ್ತು ಪುತ್ರ ಸುಧಾಕರನ್, ಆಪ್ತೆ ಶಶಿಕಲಾ ನಟರಾಜನ್ ಹಾಗೂ ಇಳವರಸಿಯವರನ್ನು ಬಿಡುಗಡೆ ಮಾಡಲಾಗಿದೆ.
ಜಯಲಲಿತಾ ಬಿಡುಗಡೆ ಹಿನ್ನಲೆಯಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಪರಪ್ಪನ ಅಗ್ರಹಾರ ಜೈಲಿನ ಬಳಿ ಸಾಗರೋಪಾದಿಯಲ್ಲಿ ನೆರೆದಿದ್ದರು. ಜೈಲಿನಿಂದ ಜಯಲಲಿತಾ ಹೊರ ಬರುತ್ತಿದ್ದಂತೆಯೇ ಜಯಲಲಿತಾಪರ ಘೋಷಣೆ ಕೂಗಿ ಸಂಭ್ರಮ ಆಚರಿಸಿದರು. ಝಡ್ ಪ್ಲಸ್ ಭದ್ರತೆಯೊಂದಿಗೆ ಜಯಲಲಿತಾ ಕೇಂದ್ರ ಕಾರಾಗ್ರಹದಿಂದ ಹೆಚ್ ಎ ಎಲ್ ವಿಮಾನ ನಿಲ್ದಾಣದ ಮೂಲಕ ತಮಿಳುನಾಡಿಗೆ ತೆರಳಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸೆ.27ರಂದು ನಾಲ್ಕು ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಜಯಲಲಿತಾ ಅವರಿಗೆ 100 ಕೋಟಿ ದಂಡ ವಿಧಸಲಾಗಿತ್ತು. ಅ.17ರಂದು ಸುಪ್ರೀಂ ಕೋರ್ಟ್ ಜಯಲಲಿತಾ ಹಾಗೂ ಇತರ ಮೂವರು ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ನಾಲ್ಕು ವರ್ಷದ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿತ್ತು. ಸುಪ್ರೀಂ ಕೋರ್ಟ್ ಆದೇಶ ಪ್ರತಿ ಅ.17ರಂದು ಜೈಲು ಅಧೀಕ್ಷಕರ ಕೈಸೇರದ ಹಿನ್ನಲೆಯಲ್ಲಿ ಜಯಲಲಿತಾ ಅ.18ರಂದು ಬಿಡುಗಡೆಮಾಡಲಾಯಿತು.