ನವದೆಹಲಿ : 'ಕಪ್ಪುಹಣ'ದ ಸಂಬಂಧ ಈ ಹಿಂದೆ ಯುಪಿಎ ಸರ್ಕಾರವನ್ನು ನಿಂದಿಸಿದ್ದಕ್ಕಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಒತ್ತಾಯಿಸಿದ್ದಾರೆ.
ಕಪ್ಪುಹಣ ಹೊಂದಿರುವ ಖಾತೆದಾರರ ಹೆಸರನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿರುವುದನ್ನು ತೀವ್ರ ವಾಗಿ ಖಂಡಿಸಿರುವ ಖುರ್ಷಿದ್ ವಿದೇಶಗಳೊಂದಿಗೆ ಮಾಡಿಕೊಂಡಿರುವ ದ್ವಿತೆರಿಗೆ ತಡೆ ಒಪ್ಪಂದವನ್ನು ಉಲ್ಲಂಘಿಸಿ, ಎನ್.ಡಿ.ಎ ಸರ್ಕಾರ ಕಪ್ಪು ಹಣದ ಬಗ್ಗೆ ದೇಶದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ.
ಭಾರತವು ಯಾವ ರಾಷ್ಟ್ರಗಳೊಂದಿಗೆ ದ್ವಿತೆರಿಗೆ ತಡೆ ಒಪ್ಪಂದಕ್ಕೆ ಸಹಿ ಹಾಕಿದೆಯೋ, ಅಂತಹ ರಾಷ್ಟ್ರಗಳು ಕಪ್ಪುಹಣದ ಬಗ್ಗೆ ನೀಡಿರುವ ಮಾಹಿತಿಗಳನ್ನು ಬಹಿರಂಗಪಡಿಸುವುದು ಅಸಾಧ್ಯ ಎಂದು ಸರ್ಕಾರ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಎನ್.ಡಿ.ಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮುಖಂಡ, ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದಾಗ, ಕಪ್ಪುಹಣ ವಾಪಸ್ ತರದೇ ಇದ್ದದ್ದಕ್ಕೆ ಯುಪಿಎ ಸರ್ಕಾರವನ್ನು ನಿಂದಿಸುತ್ತಿದ್ದರು. ಆದರೆ ಈಗ ಅವರೇ ಖಾತೆದಾರರ ಹೆಸರು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿಯದ್ದು ದ್ವಿಮುಖ ನೀತಿ ಎಂದು ಟೀಕಿಸಿದ್ದಾರೆ.
ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲೂ ಕಪ್ಪುಹಣ ವಾಪಸ್ ತರುವುದಕ್ಕೆ ದ್ವಿತೆರಿಗೆ ತಡೆ ಒಪ್ಪಂದ ಅಡ್ಡಿಯಾಗಿತ್ತು. ಆದಾಗ್ಯೂ ಬಿಜೆಪಿಯವರು ಸರ್ಕಾರವನ್ನು ಟೀಕಿಸುತ್ತಿದ್ದರು. ಈಗ ಅವರೇ ಆಡಳಿತ ನಡೆಸುತ್ತಿದ್ದಾರೆ ಹಾಗೂ ಯುಪಿಎ ಸರ್ಕಾರ ಏನು ಹೇಳಿತ್ತೋ ಅದನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ವಿನಾಕಾರಣ ನಿಂದಿಸಿದ್ದಕ್ಕೆ ಮೋದಿ ಸರ್ಕಾರ ಕ್ಷಮೆ ಕೋರಬೇಕು ಎಂದು ಖುರ್ಷಿದ್ ಆಗ್ರಹಿಸಿದ್ದಾರೆ.