ನವದೆಹಲಿ : 'ಕಪ್ಪುಹಣ' ವಾಪಸ್ ತರುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದೆ.
ಕಪ್ಪುಹಣ ಹೊಂದಿರುವವರ ಬಗ್ಗೆ ಗೌಪ್ಯತೆ ಕಾಪಾಡುವುದು ಅನಿವಾರ್ಯವಾಗಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸುಪ್ರೀಂ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಆದಾಯ ಮತ್ತು ತೆರಿಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಸ್ವಿಜರ್ ಲ್ಯಾಂಡ್ ಗೆ ಭೇಟಿ ನೀಡಿ ಅಲ್ಲಿನ ಬ್ಯಾಂಕ್ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದ್ದಾರೆ.
ಅಧಿಕಾರಿಗಳ ತಂಡದ ನೇತೃತ್ವವನ್ನು ಆದಾಯ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ ದಾಸ್ ವಹಿಸಲಿದ್ದು, ಸಿಟಿಬಿಟಿ ಚೇರ್ ಮೆನ್ ಕೆ.ವಿ ಚೌಧರಿ ಮತ್ತು ವಿತ್ತ ಸಚಿವಾಲಯದ ವಿದೇಶಿ ತೆರಿಗೆ ವಿಭಾಗದ ಇಬ್ಬರು ಅಧಿಕಾರಿಗಳು ತಂಡದಲ್ಲಿರಲಿದ್ದಾರೆ. ಕಪ್ಪುಹಣ ವಾಪಸ್ ತರಲು ಉಭಯ ರಾಷ್ಟ್ರಗಳ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆಗೆ ಪ್ರಧಾನಿ ಮೋದಿ ಹೆಚ್ಚಿನ ಪ್ರಾಧಾನ್ಯತೆ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಅ.17ರಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅ.28ಕ್ಕೆ ಮುಂದೂಡಲಾಗಿದೆ. ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ಕಪ್ಪುಹಣ ಪ್ರಕರಣದಲ್ಲಿ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಪ್ಪುಹಣ ಹೊಂದಿರುವ ಖಾತೆದಾರರನ್ನು ರಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.