ನವದೆಹಲಿ : 'ಅರುಣಾಚಲ ಪ್ರದೇಶ'ದಲ್ಲಿ 2000 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ನಿರ್ಮಾಣದ ಭಾರತ ಸರ್ಕಾರದ ಪ್ರಸ್ತಾಪಕ್ಕೆ ಚೀನಾ ವ್ಯಕ್ತಪಡಿಸಿರುವ ವಿರೋಧಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಯಾರೂ ಎಚ್ಚರಿಕೆ ನೀಡುವ ಹಾಗಿಲ್ಲ ಹಾಗೂ ಭಾರತವನ್ನು ಹೆದರಿಸಲು ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಚೀನಾ ಮತ್ತೊಮ್ಮೆ ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಜನಾಥ್ ಸಿಂಗ್, ಭಾರತ ಬಲಿಷ್ಠ ರಾಷ್ಟ್ರ, ಯಾರೂ ನಮಗೆ ಎಚ್ಚರಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಭಾರತ ಕೂಡ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಉಭಯ ದೇಶಗಳೂ ಗಡಿ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈಗಿರುವ ಗಡಿ ವಿವಾದಗಳನ್ನು ಹೆಚ್ಚು ಜಟಿಲಗೊಳಿಸಬಾರದೆಂದು ಚೀನಾ ಭಾರತಕ್ಕೆ ಎಚ್ಚರಿಸಿತ್ತು.
ಚೀನಾ ಈಗಾಗಲೇ ಗಡಿಯಲ್ಲಿ ತನ್ನ ರಸ್ತೆ ಮತ್ತು ರೈಲು ಸಂಚಾರ ಮಾರ್ಗಗಳನ್ನು ಆರಂಭಿಸಿದೆ. ನಾವು ನಮ್ಮ ಗಡಿಯೊಳಗೆ ಮಾಡುವ ಕೆಲಸಕ್ಕೂ ಚೀನಾಗೂ ಯಾವುದೇ ಸಂಬಧ ಇಲ್ಲ ಎಂದು ಗೃಹ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.