ಬೆಂಗಳೂರು : ಹುಡ್ ಹುಡ್ ಚಂಡಮಾರುತದ ಅಬ್ಬರದಿಂದ ತತ್ತರಿಸಿರುವ ಆಂಧ್ರಪ್ರದೇಶಕ್ಕೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಹುಡ್ ಹುಡ್ ಚಂಡ ಮಾರುತದಿಂದ ಉಂಟಾದ ಹಾನಿಯನ್ನು ಕೂಡಲೇ ಸಾಮಾನ್ಯ ಸ್ಥಿತಿಗೆ ತರಲು ಕರ್ನಾಟಕ ಸರ್ಕಾರದ ಸಹಕಾರಕ್ಕೆ ಮನವಿ ಮಾಡಿದರು.
ಚಂಡಮಾರುತ ಅಪ್ಪಳಿಸಿದ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ, ವಿದ್ಯುತ್ ತಂತಿಗಳು ಕಡಿತಗೊಂಡಿವೆ ಹಾಗೂ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಇವೆಲ್ಲವನ್ನೂ ದುರಸ್ತಿಪಡಿಸಲು ರಾಜ್ಯದ ಸಹಕಾರ ಒದಗಿಸುವಂತೆ ನಾಯ್ಡು ಅವರು ಕೋರಿದ್ದಾರೆ. ಕೂಡಲೇ ಸ್ಪಂದಿಸಿದ ಸಿದ್ದರಾಮಯ್ಯ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ಹಾಗೂ ಇತರೆ ವಿದ್ಯುತ್ ಸರಬರಾಜು ಸಂಸ್ಥೆಗಳಿಂದ ಇಂಜಿನಿಯರ್ಗಳನ್ನು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಕಳುಹಿಸಿಕೊಡಲು ಸಮ್ಮತಿಸಿರುವುದಾಗಿ ತಿಳಿಸಿದರು.