ಮುಂಬೈ : ಲೂಟಿಕೋರರಿಂದ ಮಹಾರಾಷ್ಟ್ರವನ್ನು ರಕ್ಷಿಸಬೇಕಾಗಿದೆ. ಜನತಾ ಜನಾರ್ದನನೇ ನನ್ನ ಪಾಲಿನ ಹೈಕಮಾಂಡ್ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಾಹಾರಾಷ್ಟ್ರ ವಿಧಾನಸಭಾ ಹಿನ್ನಲೆಯಲ್ಲಿ ಮುಂಬೈ ಬಳಿಯ ಪಾಲ್ ಘರ್ ಬಳಿ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಎನ್ ಸಿಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದರು.
ಇಲ್ಲಿನ ಮೀನುಗಾರರ ಜತೆ ನನಗೆ ಹಲವು ವರ್ಷಗಳ ಒಡನಾಟವಿದೆ. ಇಲ್ಲಿನ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೆ ಎಂದರು.
ಇಲ್ಲಿನ ಮೀನುಗಾರರನ್ನು ಪಾಕಿಸ್ತಾನ ಬಂಧಿಸಿತ್ತು. ಆಗ ನಾನು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಚರ್ಚೆ ನಡೆಸಿ, 200 ಕ್ಕೂ ಹೆಚ್ಚು ಮೀನುಗಾರರನ್ನು ಬಿಡುಗಡೆ ಮಾಡಿಸಿದೆ ಎಂದು ತಿಳಿಸಿದರು.
ವಿದೇಶದಲ್ಲಿ ಬಂಧಿತರಾಗಿರುವವರ ಬಗ್ಗೆ ನಾವು ಚಿಂತಿಸಿದೆವು. ಐಸಿಸ್ ಉಗ್ರರಿಂದ ಬಂಧಿತರಾಗಿದ್ದ ಕೇರಳದ ಸಹೋದರಿಯರನ್ನು ಇರಾಕ್ ನಿಂದ ಬಿಡುಗಡೆ ಮಾಡಿಸಿದೆವು. ನಾನು ಜನತೆಗೆ ಪೈಸೆ ಪೈಸೆ ಲೆಕ್ಕ ಕೊಡುತ್ತೇನೆ. ಪ್ರತಿ ಕ್ಷಣ ಕ್ಷಣದ ಮಾಹಿತಿಯನ್ನೂ ನಾನು ನೀಡುತ್ತೇನೆ. ಆದರೆ ಕಾಂಗ್ರೆಸ್ 60 ವರ್ಷಗಳ ಲೆಕ್ಕವನ್ನು ಎಂದಾದರೂ ನೀಡಿದೆಯೇ ಎಂದು ಪ್ರಶ್ನಿಸಿದ ಮೋದಿ, 60 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ, ನಾನು ನಿಮಗೆ ಉತ್ತರ ನೀಡಲು ಸಿದ್ಧನಿದ್ದೇನೆ ಆದರೆ ಕಾಂಗ್ರೆಸ್ ಉತ್ತರ ನೀಡುವುದೇ ಎಂದು ವಾಗ್ದಾಳಿ ನಡೆಸಿದರು.
ಸೋನಿಯಾ ಗಾಂಧಿ ತೆರೆ ಹಿಂದೆ ರಾಜಕಾರಣ ಮಾಡುತ್ತಿದ್ದಾರೆ, ನಾನು ಯಾವುದೇ ಸಿಎಂ, ಪಿಎಂ ಮನೆಯಲ್ಲಿ ಜನಿಸಿಲ್ಲ, ಆದರೆ ಜನತಾ ಜನಾರ್ದನನೇ ನನ್ನ ಪಾಲಿನ ಹೈಕಮಾಂಡ್ ಎಂದು ತಿಳಿಸಿದರು.
ಭ್ರಷ್ಟಾಚಾರ ಮಹಾರಾಷ್ಟ್ರವನ್ನು ಅಕ್ಷರಶ: ನಾಶಮಾಡಿದೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ಕಾರ್ಗಿಲ್ ಹುತಾತ್ಮರ ಮನೆಗಳನ್ನೂ ಕಿತ್ತುಕೊಂಡರು. ಮಹರಾಷ್ಟ್ರವನ್ನು ಸ್ಕ್ಯಾಮ್ ಮಹಾರಾಷ್ಟ್ರವನ್ನಾಗಿ ಮಾಡಿದರು. ನಾವು ಸಿಲ್ಕ್ ಮಹಾರಾಷ್ಟ್ರ ನಿರ್ಮಾಣ ಮಾಡುತ್ತೇವೆ. ಲೂಟಿಕೋರರಿಂದ ಮಾಹಾರಾಷ್ಟ್ರವನ್ನು ರಕ್ಷಿಸಬೇಕಾಗಿದೆ ಎಂದು ಕರೆ ನೀಡಿದರು.