ನವದೆಹಲಿ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅ.17ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಅನಾರೋಗ್ಯ ನೆಪವೊಡ್ಡಿ ಜಾಮೀನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಹೆಚ್.ಎಲ್.ದತ್ತು ಪೀಠದ ಮುಂದೆ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಪ್ರಸ್ತಾಪ ಮಾಡಲಾಯಿತು. ಆದರೆ ಕೆಲ ತಾಂತ್ರಿಕ ತೊಂದರೆ ಹಿನ್ನಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಅ.17ರಂದು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಅನಾರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಜಯಲಲಿತಾ ಪರ ವಕೀಲ ಫಾಲಿ ನಾರಿಮನ್ ಸುಪ್ರೀಂ ಕೋರ್ಟ್ ನಲ್ಲಿ ವಾದಮಂಡಿಸಿದರು.
ಜಯಲಲಿತಾ ಪರ ಹಿರಿಯ ವಕೀಲರು ಲಂಡನ್ ನಲ್ಲಿರುವುದರಿಂದ ಅವರು ಬರುವುದು ವಿಳಂಬವಾಗುತ್ತದೆ. ಈ ಹಿನ್ನಲೆಯಲ್ಲಿ ಜಯಲಲಿತಾಪರ ವಾದ ಮಂಡನೆ ಮಾಡುವಂತೆ ಜಯಲಲಿತಾ ಪರ ಕೆಲವರು ನಾರಿಮನ್ ರನ್ನು ಕೇಳಿಕೊಂಡ ಹಿನ್ನಲೆಯಲ್ಲಿ, ಜಯಲಲಿತಾ ಪರ ಫಾಲಿ ನಾರಿಮನ್ ವಾದ ಮಂಡಿಸಿದರು ಎಂದು ತಿಳಿದುಬಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪರ ವಾದ ಮಂಡನೆ ಮಾಡುತ್ತಿರುವ ನ್ಯಾ.ಫಾಲಿ ನಾರಿಮನ್ ಈಗ ಜಯಲಲಿತಾ ಪರ ವಾದ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ. ಅ.17ರ ಬಳಿಕವೂ ಫಾಲಿ ನಾರಿಮನ್ ಅವರು ಜಯಲಲಿತಾ ಅವರ ಪರ ವಾದ ಮಂಡನೆ ಮಾಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಜಯಲಲಿತಾ ಅವರಿಗೆ 4ವರ್ಷ ಜೈಲುಶಿಕ್ಷೆ ಹಾಗೂ 100 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಜಾಮೀನು ನೀಡುವಂತೆ ಕೋರಿ ಜಯಲಲಿತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು.