ಹೈದ್ರಾಬಾದ್ : ಆಂಧ್ರಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಹಿನ್ನಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದ್ದು, ರಸ್ತೆಗಳಲ್ಲಿ ವಿದ್ಯುತ್ ಕಂಭಗಳು, ಬೃಹದಾಕಾರದ ಮರಗಳು ದರಾಶಾಹಿಯಾಗಿವೆ. ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ತಂಡಗಳು ಸನ್ನದ್ಧವಾಗಿ ನಿಂತಿವೆ.
ಹುಡ್ ಹುಡ್ ಚಂಡಮಾರುತ ವಿಶಾಖ ಪಟ್ಟಣಂ ಕರಾವಿಳಿಯಿಂದ ಕೇವಲ 40 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ರಕ್ಷಣಾ ಕಾರ್ಯಕ್ಕಾಗಿ 15 ಎನ್.ಡಿ.ಆರ್.ಎಫ್ ತಂಡಗಳು, 250 ಭಾರತೀಯ ಸೇನಾ ಯೋಧರು, 4 ಹಡಗುಗಳು, ವಾಯುಪಡೆಯ 10 ಹೆಲಿಕ್ಯಾಪಟರ್ ಗಳು, ನೂರಕ್ಕೂ ಹೆಚ್ಚು ರಬ್ಬರ್ ಬೋಟ್ ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಯಲಹಂಕಾ ವಾಯು ನೆಲೆಯಿಂದ 3 ಹೆಲಿಕ್ಯಾಪ್ಟರ್ ಗಳನ್ನು ರವಾನಿಸಲಾಗಿದೆ.
ಚಂಡಮಾರುತ ಭೀತಿ ಹಿನ್ನಲೆಯಲ್ಲಿ ಈಗಾಗಲೇ ಆಂಧ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. 370 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಸರ್ಕಾರದ ವತಿಯಿಂದ ಸಹಾಯವಾಣಿ ಕೂಡ ಆರಂಭವಾಗಿದೆ.(01126107956)
ಪರಿಹಾರ ಶಿಬಿರಗಳಲ್ಲಿ ಆಹಾರ, ನೀರು, ಔಷಧ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ಮುಳುಗು ತಜ್ನರು ಹಾಗೂ ವೈದ್ಯರು ಶಿಬಿರಕ್ಕೆ ಆಗಮಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಚಂಡಮಾರುತದಿಂದ ಉಂಟಾಗುವ ಅನಾಹುತಗಳನ್ನು ಎದುರಿಸಲು ಮುಂಜಾಗೃತ ಕ್ರಮವಾಗಿ ಸರ್ಕಾರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.