ಹೈದ್ರಾಬಾದ್/ಭುವನೇಶ್ವರ್ : ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯಲ್ಲಿ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ತನ್ನ ಅವಾಂತರ ಆರಂಭಿಸಿದೆ. ಉಭಯ ರಾಜ್ಯಗಳಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದೆ.
ಆಂಧ್ರದ ವಿಶಾಖಪಟ್ಟಂ ಗೆ ಮಧ್ಯಾಹ್ನದ ಹೊತ್ತಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಆಂಧ್ರದಿಂದ 70 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಆಗಲೇ ತನ್ನ ಅಬ್ಬರವನ್ನು ಆರಂಭಿಸಿದೆ.
ಆಂಧ್ರಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದ್ದು, ಸಮುದ್ರದಲ್ಲಿ 6 ಅಡಿಯಷ್ಟು ಬೃಹದಾಕಾರದ ಅಲೆಗಳು ಮೇಲೇಳುತ್ತಿವೆ. ರಸ್ತೆಗಳಲ್ಲಿ ಬೃಹದಾಕಾರದ ಮರಗಳು, ವಿದ್ಯುತ್ ಕಂಭಗಳು ಧರೆಗುರುಳಿವೆ. ವಿಶಾಖಪಟ್ಟಣಂ, ಶ್ರೀಕಾಕುಳಂ ನಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಮುಂಜಾಗೃತಾ ಕ್ರಮವಾಗಿ ರೈಲು ಸಂಚಾರ, ವಿಮಾನ ಸಂಚಾರ ಹಾಗೂ ಬಸ್ ಸಂಚಾರಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಆಂಧ್ರಪ್ರದೇಶ, ಒಡಿಶಾಗಳಲ್ಲಿ 70 ರೈಲು ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಪೂರ್ವ ಕರಾವಳಿಯ 35 ರೈಲುಗಳನ್ನು ಸ್ಥಗಿತಗೊಳಿಸಲಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಹುಡ್ ಹುಡ್ ಚಂಡಮಾರುತ ಗಂಟೆಗೆ 190 ಕಿ.ಮೀ ವೇಗದಲ್ಲಿ ಬೀಸಲಿದ್ದು, ಈಗಾಗಲೇ 100-110 ಕಿ.ಮೀ ವೇಗದಲ್ಲಿ ಭಾರೀ ಬಿರುಗಾಳಿ ಆರಂಭವಾಗಿದೆ. ಚಂಡಮಾರುತ ಭೀತಿ ಹಿನ್ನಲೆಯಲ್ಲಿ ಆಂಧ್ರ ಹಾಗೂ ಒಡಿಶಾಗಳಲ್ಲಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಚಂಡಮಾರುತ ಅಪ್ಪಳಿಸಿದ 6ಗಂಟೆ ಬಳಿಕ ಬಿರುಗಾಳಿಯ ವೇಗ ಕ್ಷಿಣಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಎನ್ ಡಿ ಆರ್ ಎಫ್ ತಂಡ ಹಾಗೂ ಸೇನೆ ಸಜ್ಜಾಗಿವೆ.