ಮುಂಬೈ : ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸುವ ಮೂಲಕ ಶತೃಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಯೋಗ್ಯವಾದ ಉತ್ತರ ದೊರೆತಿದೆ, ಅವರು ಗಡಿ ಉಲ್ಲಂಘನೆಯಂತಹ ದುಸ್ಸಾಹಸವನ್ನು ಮತ್ತೊಮ್ಮೆ ನಡೆಸುವುದಿಲ್ಲ. ನಮ್ಮ ಸೇನೆ ಪಾಕಿಸ್ತಾನದ ಬಾಯಿ ಮುಚ್ಚಿಸಿದೆ ಎಂದಿದ್ದಾರೆ.
ಶೆಲ್ ದಾಳಿಗಳಿಂದ ಬೆದರಿ ತಮ್ಮ ಮನೆಗಳನ್ನು ತೊರೆದಿದ್ದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಪಾಕಿಸ್ತಾನ ದಾಳಿಗೆ ಸಂಬಂಧಿಸಿದಂತೆ ತಮ್ಮ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಮೋದಿ, ಕಾಂಗ್ರೆಸ್, ಗಡಿ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಹೇಳಿಕೆ ನೀಡುವುದರಲ್ಲಿ ಕಾರ್ಯನಿರತವಾಗಿದೆ. ಆದರೆ ಇದು ಹೇಳಿಕೆ ನೀಡುವ ಸಮಯವಲ್ಲ, ನಮ್ಮ ಸೈನಿಕರು ಗುಂಡಿನ ಮೂಲಕ ಉತ್ತರ ನೀಡಬೇಕಿರುವ ಸಮಯ ಎಂದಿದ್ದಾರೆ.