ಇಸ್ಲಾಮಾಬಾದ್ : 'ಪಾಕ್ ಪುಂಡಾಟಿಕೆ'ಗೆ ಭಾರತದಿಂದ ತೀವ್ರ ಸ್ವರೂಪದ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಈಗ ಶಾಂತಿ ಮಂತ್ರ ಜಪಿಸತೊಡಗಿದ್ದಾರೆ!
ಭಾರತದ ವಿರುದ್ಧ ಅಪ್ರಚೋದಿತವಾಗಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದಾಳಿಗೆ ಕಳೆದ ಕೆಲವು ದಿನಗಳಿಂದ ಭಾರತೀಯ ಸೇನೆ ಕೊಡುತ್ತಿರುವ ತೀವ್ರ ಪ್ರತ್ಯುತ್ತರಕ್ಕೆ ತತ್ತರಿಸಿದ ಪಾಕಿಸ್ತಾನ ಈಗ ಮುಖ ಉಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಉಭಯ ದೇಶಗಳೂ ಕದನ ವಿರಾಮ ಒಪ್ಪಂದವನ್ನು ಗೌರವಿಸಬೇಕು ಎಂದು ಷರೀಫ್ ಕರೆ ನೀಡಿದ್ದಾರೆ.
ಅ.10ರಂದು ನಡೆದ ಪಾಕಿಸ್ತಾನ ಭದ್ರತಾ ಮಂಡಳಿ ಸಭೆಯಲ್ಲಿ, ಕದನ ವಿರಾಮ ಒಪ್ಪಂದವನ್ನು ಗೌರವಿಸಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಕರೆ ನೀಡಿದ್ದಾರೆ. ಆದರೆ ಗಡಿ ಉಲ್ಲಂಘನೆ ಆರೋಪವನ್ನು ಪಾಕಿಸ್ತಾನ ಅಲ್ಲಗಳೆದಿದೆ. ಭಾರತ ಆರೋಪಿಸಿರುವಂತೆ ತಾನು ಗಡಿ ಉಲ್ಲಂಘನೆ ಮಾಡಿಲ್ಲ. ತನ್ನ ರಕ್ಷಣೆಗಾಗಿ ಪಾಕಿಸ್ತಾನ ಗುಂಡಿನ ದಾಳಿ ನಡೆಸುತ್ತಿದೆ ಎಂದು ಹೇಳಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು ಭಾಗಿಯಾಗಿದ್ದರು. ಶಾಂತಿ ಬಯಸುತ್ತಿರುವುದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದಿರುವ ಪಾಕಿಸ್ತಾನ, ಭಾರತ ಸರ್ಕಾರಕ್ಕೆ ಕದನ ವಿರಾಮ ಒಪ್ಪಂದವನ್ನು ಗೌರವಿಸಬೇಕು ಎಂದು ಹೇಳಿದೆ. ಇದೇ ವೇಳೆ ಭಾರತೀಯ ಯೋಧರ ಗುಂಡಿನ ದಾಳಿಗೆ ಪಾಕಿಸ್ತಾನ ನಾಗರಿಕರು ಸಾವನ್ನಪ್ಪಿರುವುದಕ್ಕೆ ನವಾಜ್ ಷರೀಫ್ ವಿಷಾದ ವ್ಯಕ್ತಪಡಿಸಿದ್ದಾರೆ.
ಗಡಿಯಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದ ಹಿನ್ನೆಲೆಯಲ್ಲಿ, ಪಾಕಿಸ್ತಾನದ ದುಸ್ಸಾಹಸ ಮುಂದುವರೆದರೆ ಭರಿಸಲಾಗದಷ್ಟು ದುಬಾರಿ ನಷ್ಟವನ್ನು ಪಾಕಿಸ್ತಾನ ಅನುಭವಿಸಬೇಕಾದೀತು ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದರು.