ನವದೆಹಲಿ : ಭಾರತದ ಖ್ಯಾತ ವೈದ್ಯಕೀಯ ಸಂಸ್ಥೆ, ಏಮ್ಸ್ ( ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಇನ್ಸ್ಟಿಟ್ಯೂಟ್) ನಲ್ಲಿ ಬಡ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಹಣದ ಕೊರತೆ ಎದುರಾಗಿದೆ.
ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಏಮ್ಸ್ ಹಣದ ಕೊರತೆ ಎದುರಿಸುತ್ತಿದೆ ಎಂದು ಸ್ವತಃ ಏಮ್ಸ್ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಡಿ.ಕೆ ಶರ್ಮಾ ಸ್ಪಷ್ಟಪಡಿಸಿದ್ದಾರೆ. ದೆಹಲಿ ಹೈಕೋರ್ಟ್ ಗೆ ಸಲ್ಲಿಸಲಾಗಿರುವ ಅಫಿಡವಿಟ್ ನಲ್ಲಿ ಏಮ್ಸ್ ಆಸ್ಪತ್ರೆಯ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಏಮ್ಸ್ ಎದುರಿಸುತ್ತಿರುವ ಇಂದಿನ ಸ್ಥಿತಿಗೆ ಕೇಂದ್ರ ಸರ್ಕಾರವನ್ನು ಹೊಣೆ ಮಾಡಿರುವ ಆಸ್ಪತ್ರೆಯ ಮೇಲ್ವಿಚಾರಕ ಡಿ.ಕೆ ಶರ್ಮಾ, ಆಸ್ಪತ್ರೆಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಸಂದಾಯವಾಗುತ್ತಿರುವ ಹಣ ಯಾವುದಕ್ಕೂ ಸಾಲುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ನೀಡುತ್ತಿರುವ ಹಣದಲ್ಲಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ವಸ್ತುಗಳನ್ನು ಖರೀದಿಸಲು ಮಾತ್ರ ಸಾಧ್ಯವಾಗುತ್ತಿದೆ. ಬಡರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಅಥವಾ ಇನ್ನಿತರ ಹೈಟೆಕ್ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ನೀಡುತ್ತಿರುವ ನಿಧಿಯಿಂದ ಸಾಧ್ಯವಾಗುತ್ತಿಲ್ಲ ಎಂದು ಶರ್ಮಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಬಡವರಿಗಾಗಿ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ಸೂಕ್ತ ನೀತಿಗಳನ್ನು ರಚಿಸಬೇಕು, ಪರಿಷ್ಕೃತ ನೀತಿಗಳ ಪ್ರಕಾರ ಹಣ ಮಂಜೂರು ಮಾಡಿದರೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ ನೀಡಬಹುದು ಎಂದು ಕೋರ್ಟ್ ಗೆ ಏಮ್ಸ್ ಆಸ್ಪತ್ರೆ ತಿಳಿಸಿದೆ.
ಸೊಂಟ, ಮೊಣಕಾಲು ಮೂಳೆಗಳ ಶಸ್ತ್ರಚಿಕಿತ್ಸೆ ನಡೆಸಲು ದಿನಗೂಲಿ ನೌಕರನೊಬ್ಬನಿಗೆ ಏಮ್ಸ್ ಆಸ್ಪತ್ರೆಯ ವೈದ್ಯರು 8 ಲಕ್ಷರೂಪಾಯಿ ಪಾವತಿ ಮಾಡಲು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಶಸ್ತ್ರ ಚಿಕಿತ್ಸೆಗೊಳಗಾಗಬೇಕಿದ್ದ ವ್ಯಕ್ತಿ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಏಮ್ಸ್ ಆಸ್ಪತ್ರೆ ವಿರುದ್ಧ ದೆಹಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡದೇ ಇರುವುದಕ್ಕೆ ಕಾರಣ ತಿಳಿಸಿ ಎಂದು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಗೆ ಉತ್ತರಿಸಿರುವ ಏಮ್ಸ್ ವೈದ್ಯರು ಕೇಂದ್ರ ಸರ್ಕಾರ ಮಂಜೂರು ಮಾಡುತ್ತಿರುವ ಹಣ ಅತ್ಯಲ್ಪ ಮೊತ್ತದಾಗಿದ್ದು ಬಡರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಮರ್ಥಿಸಿಕೊಂಡಿದೆ.