ಜಮ್ಮು-ಕಾಶ್ಮೀರ : 'ಪಾಕ್ ಪುಂಡಾಟಿಕೆ'ಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿರುವುದಕ್ಕೆ ಹೆದರಿರುವ ಪಾಕಿಸ್ತಾನ ಜಮ್ಮು, ಸಾಂಬಾ ಪ್ರದೇಶಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಿಲ್ಲಿಸಿದೆ.
ಪಾಕಿಸ್ತಾನ ಸೇನೆ ದಾಳಿಗೆ ಅ.9ರಂದು ಭಾರತೀಯ ಸೇನೆ ತೀವ್ರ ಪ್ರತಿದಾಳಿ ನಡೆಸಿ ಎಚ್ಚರಿಕೆ ನೀಡಿತ್ತು. ಭಾರತೀಯ ಸೇನೆ ದಾಳಿಯಿಂದ ಪಾಕಿಸ್ತಾನಕ್ಕೆ ಸಾಕಷ್ಟು ಹಾನಿಯೂ ಸಂಭವಿಸಿತ್ತು. ಪರಿಣಾಮ, ಅ.9ರ ರಾತ್ರಿ ಹಾಗೂ ಅ.10 ರ ಬೆಳಿಗ್ಗೆ ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಪಾಕಿಸ್ತಾನ ದಾಳಿ ನಡೆಸಿಲ್ಲ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಆದರೆ ಇದೇ ವೇಳೆ ಸಂಪೂರ್ಣವಾಗಿ ತನ್ನ ದಾಳಿಯನ್ನು ಬಿಡದ ಪಾಕಿಸ್ತಾನ, ಕತುವಾ ಜಿಲ್ಲೆಯ ಹೀರಾ ನಗರ್ ಸೆಕ್ಟರ್ ನಲ್ಲಿ 20 ನಿಮಿಷಗಳ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಿ.ಎಸ್.ಎಫ್ ವಕ್ತಾರರು ತಿಳಿಸಿದ್ದಾರೆ.
ಕಳೆದ 9 ದಿನಗಳಿಂದ ಪಾಕಿಸ್ತಾನ ಗಡಿ ಭಾಗದಲ್ಲಿ ನಿರಂತರ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ದಾಳಿಗೆ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು 8 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ದಾಳಿಯ ಭೀತಿಯಿಂದ 32,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಪಾಕಿಸ್ತಾನದ ಆಕ್ರಮಣಕಾರಿ ವರ್ತನೆಗೆ ತಕ್ಕ ಪ್ರತಿರೋಧ ತೋರುತ್ತಿದ್ದೇವೆ, ಗಡಿಯಲ್ಲಿ ಪಾಕಿಸ್ತಾನದ ದುಸ್ಸಾಹಸ ಮುಂದುವರೆದರೆ ಭರಿಸಲಾಗದಷ್ಟು ದುಬಾರಿ ನಷ್ಟವನ್ನು ಪಾಕಿಸ್ತಾನ ಅನುಭವಿಸಬೇಕಾದೀತು ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಎಚ್ಚೆತ್ತುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆದಿದ್ದಾರೆ.