ನವದೆಹಲಿ : 'ಉದ್ಯೋಗ ಸೃಷ್ಠಿ'ಯಾದರೆ ದೇಶ ಅಭಿವೃದ್ಧಿ ಹೊಂದಲಿದೆ, ಉದ್ಯೋಗ ಸೃಷ್ಠಿಯೇ ಅಭಿವೃದ್ಧಿಯ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಅ.9ರಂದು ನಡೆದ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ, ದೇಶ ಅಭಿವೃದ್ಧಿಯಾಗಬೇಕಾದರೆ ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಬೇಕು, ಉದ್ಯೋಗಳ ಮೂಲಕ 'ಮೇಡ್ ಇನ್ ಇಂಡಿಯಾ' ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ದೇಶ ಅಭಿವೃದ್ಧಿ ಹೊಂದಬೇಕಾದರೆ ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದಬೇಕು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿಸ್ಪರ್ಧಿ ಅಥವಾ ಶತ್ರುಗಳಲ್ಲ ಎಂಬುದನ್ನು ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಯೂ ಅರಿತುಕೊಳ್ಳಬೇಕು, ರಾಜ್ಯ ಸರ್ಕಾರ ಹೂಡಿಕೆದಾರರೊಂದಿಗಿದ್ದರೆ ಕೇಂದ್ರ ಸರ್ಕಾರವೂ ನಿಮ್ಮೊಂದಿಗಿರುತ್ತದೆ ಎಂದು ಹೂಡಿಕೆದಾರರಿಗೆ ತಿಳಿಸಿದ್ದಾರೆ.
ಭಾರತದಲ್ಲಿ ಹೂಡಿಕೆದಾರರಿಗೆ ಅಗಾಧ ಅವಕಾಶಗಳಿವೆ, ಭಾರತವನ್ನು ಕೇವಲ ಮಾರುಕಟ್ಟೆಯೆಂದು ಪರಿಗಣಿಸಬೇಡಿ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಹೂಡಿಕೆದಾರರಿಗೆ ಪ್ರಧಾನಿ ಮೋದಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅ.8ರಿಂದ ಮಧ್ಯಪ್ರದೇಶದಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿದ್ದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮ್ಮೇಳನವನ್ನು ಉದ್ಘಾಟಿಸಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶ ರಾಜ್ಯ ಭಾರತದ ಅರ್ಥಿಕತೆಯ ಚಲನಾ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಮಾರು 4,000 ವಿದೇಶಿ ಪ್ರತಿನಿಧಿಗಳು ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.