ನವದೆಹಲಿ : ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗಡಿಯಲ್ಲಿ ಪಾಕ್ ಸೇನೆ ಪ್ರತಿದಿನ ಕ್ಯಾತೆ ತೆಗೆಯುತ್ತಿದ್ದರೂ ಮೌನ ವಹಿಸಿರುವ ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಭಾಷಣದಲ್ಲಾಗಲೀ, ಟ್ವಿಟರ್ ನಲ್ಲಾಗಲೀ ಎಲ್ಲೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಶಕಿಲ್ ಅಹ್ಮದ್ ಗುಡುಗಿದ್ದಾರೆ.
ಪಾಕ್ ಸೇನೆ ದಾಳಿ ನಡೆಸುತ್ತಿದ್ದರೂ ಸುಮ್ಮನಿರುವ ಪ್ರಧಾನಿ ಮೋದಿಯವರ 56 ಇಂಚಿನ ಎದೆ ಈಗ 5.6 ಇಂಚಿಗೆ ಇಳಿದಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ 283 ಸಂಸದರನ್ನು ಹೊಂದಿದ್ದರೂ ರಕ್ಷಣಾ ಸಚಿವರಾಗುವ ಯೋಗ್ಯತೆಯಿರುವ ಒಬ್ಬರನ್ನು ಹುಡುಕಲು ಮೋದಿಯವರಿಗೆ ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಗೂ ಮೊದಲು ದೇಶದ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದವರಿಗೆ ಸಮರ್ಥ ರಕ್ಷಣಾ ಸಚಿವರು ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಲೋಕಸಭಾ ಚುನಾವಣೆ ವೇಳೆ ಪಾಕಿಸ್ತಾನ ಮತ್ತು ಚೀನಾ ಗಡಿ ಅತಿಕ್ರಮಣ ಮಾಡಿದಾಗ ಇಂತಹ ಪರಿಸ್ಥಿತಿ ಎದುರಿಸಲು ಪ್ರಧಾನಿ 56 ಇಂಚಿನ ಎದೆ ಹೊಂದಿರಬೇಕು ಎಂದು ಟ್ವಿಟ್ ಮಾಡಿದ್ದರು.