ಮುಂಬೈ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಿವಸೇನೆ, ಮೊದಲು ಪಾಕಿಸ್ತಾನದಿಂದ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆ ಬಗ್ಗೆ ಗಮನ ಹರಿಸಿ ನಂತರ ಮಹಾರಾಷ್ಟ್ರದ ಬಗ್ಗೆ ಗಮನ ಹರಿಸಬಹುದು ಎಂದು ಹೇಳಿದೆ.
ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಳೆಯದೇ ಇರುವುದರ ಪರಿಣಾಮ ಪಾಕಿಸ್ತಾನ ಭಾರತದ ವಿರುದ್ಧ ತನ್ನ ದುಷ್ಕೃತ್ಯಗಳನ್ನು ಮುಂದುವರೆಸುತ್ತಲೇ ಇದೆ. ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು 56 ಇಂಚಿನ ಎದೆ ಬೇಕಿಲ್ಲ ಬೇಕಾಗಿರುವುದು ಬದ್ಧತೆ ಎಂದು ಶಿವಸೇನೆ ಪ್ರಧಾನಿ ಮೋದಿಗೆ ಕುಟುಕಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ. ಆದರೆ ಮೋದಿ ಮಹಾರಾಷ್ಟ್ರದಲ್ಲಿ ಠಿಕಾಣಿ ಹೂಡಿರುವುದು ರಾಷ್ಟ್ರೀಯ ಭದ್ರತೆಯನ್ನೇ ಅಣಕಿಸುವಂತಿದೆ ಎಂದು ಶಿವಸೇನೆ ಆರೋಪಿಸಿದೆ.
ಮಹಾರಾಷ್ಟ್ರದ ಬಗ್ಗೆ ಯೋಚನೆ ಮಾಡಲು ನಮಗೆ ಕಾಲಾವಕಾಶವಿದೆ ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಮಹಾರಾಷ್ಟ್ರಕ್ಕಿಂತಲೂ ದೇಶದ ಬಗ್ಗೆ ಯೋಚಿಸುವುದು ಅತ್ಯಗತ್ಯ ಎಂಬುದು ಬಿಜೆಪಿ ಮಾಜಿ ಮಿತ್ರಪಕ್ಷದ ವಾದ.
ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಆದರೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ, ಪಾಕ್ ಗುಂಡಿನ ದಾಳಿಗೆ ಹೆದರಿ ಗಡಿ ಭಾಗದಲ್ಲಿನ ಜನತೆ ವಲಸೆ ಹೋಗುತ್ತಿದ್ದಾರೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
ಗಡಿ ಪ್ರದೇಶದಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಜೀವ ರಕ್ಷಣೆಗಾಗಿ ಭಾರತೀಯರು ರಾತ್ರೋರಾತ್ರಿ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.