ಬೆಂಗಳೂರು : ಜಾಮೀನು ಅರ್ಜಿ ವಜಾ ಆದೇಶ ಹೊರಬೀಳುತ್ತಿದ್ದಂತೆಯೇ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆಘಾತವಾಗಿದ್ದು, ಜೈಲಿನಲ್ಲಿಯೇ ಕುಸಿದು ಬಿದ್ದಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಹಿನ್ನಲೆಯಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದ್ಯ ಪೀಠದಲ್ಲಿ ನಡೆದಿತ್ತು. ಬೆಳಿಗ್ಗೆಯಿಂದಲೂ ಕೋರ್ಟ್ ವಿಚಾರಣೆ ಕುರಿತಾಗಿ ಪರಪ್ಪನ ಅಗ್ರಹಾರ ಜೈಲಿನ ಕೊಠಡಿಯಲ್ಲಿಯೇ ಜಯಲಲಿತಾ ಟಿ.ವಿ ಚಾನಲ್ ಮೂಲಕ ಕೋರ್ಟ್ ಕಲಾಪದ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದರು.
ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಅರ್ಜಿ ವಜಾಗೊಳಿಸಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಆಘಾತಗೊಂಡಿರುವ ಜಯಲಲಿತಾ ಕುಳಿತಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಜೈಲಿನ ವೈದ್ಯರಾದ ಡಾ.ವಿಜಯ್ ಕುಮಾರ್ ತಪಾಸಣೆಗೆ ದೌಡಾಯಿಸಿದ್ದು, ಶಾಕ್ ನಿಂದ ಆಘಾತವಾಗಿದೆ. ಆಘಾತದಿಂದ ಲೋ ಬಿಪಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಜಾಮೀನು ನಿರಾಕರಿಸಿದ್ದರಿಂದ ಬೇಸರಗೊಂಡ ಜಯಲಲಿತಾ ಹಾಗೂ ಇಳವರಿ, ಶಶಿಕಲಾ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಜಯಲಲಿತಾ ಅವರನ್ನು ವಿಶೇಷ ಮಹಿಳಾ ಕೊಠಡಿಗೆ ರವಾನಿಸಲಾಗಿದೆ.
ಜಯಲಲಿತಾ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಬೀಳುತ್ತಿದ್ದಂತೆಯೇ ಜಯಲಲಿತಾ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಕೆಲ ಸಮಯದ ಹಿಂದಷ್ಟೇ ಜಯಲಲಿತಾ ಅವರಿಗೆ ಜಾಮೀನು ಮಂಜೂರಾಗಿದೆ ಎಂಬ ವದಂತಿ ಹಬ್ಬಿತ್ತು. ಇದರಿಂದ ಸಂತೋಷಗೊಂಡ ಅಭಿಮಾನಿಗಳು ಹಾಗೂ ಎಐಎಡಿಎಂ ಕಾರ್ಯಕರ್ತರು, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
ಜಯಲಲಿತಾ ಜಾಮೀನು ಅರ್ಜಿ ವಜಾ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಅಭಿಮಾನಿಗಳಿಗೆ ಆಘಾತವಾಗಿದೆ. ಚೆನ್ನೈನಲ್ಲಿ ಸಂಭ್ರಮಾಚರಿಸುತ್ತಿದ್ದ ಹಲವು ಅಭಿಮಾನಿಗಳು ಕುಸಿದು ಬಿದ್ದಿದ್ದು, ಹಲವರು ರಸ್ತೆಯಲ್ಲಿಯೇ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.