ತಿರುವನಂತಪುರಂ : 'ಕೇರಳ' ಕಾಂಗ್ರೆಸ್, ನನ್ನನ್ನು ಹೊರಗಿನವನೆಂದು ಪರಿಗಣಿಸಿ ಟಾರ್ಗೆಟ್ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಎನ್.ಡಿ. ಟಿವಿಯೊಂದಿಗೆ ಮಾತನಾಡಿದ ಅವರು ತಮ್ಮನ್ನು ಹೊರಗಿನವನ ರೀತಿ ಪರಿಗಣಿಸುತ್ತಿರುವ ಕಾಂಗ್ರೆಸ್ ಪಕ್ಷ, ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ. ನಾನು ತಡವಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದೇನೆ, ಆದ್ದರಿಂದ ತಮ್ಮ ಬಗ್ಗೆ ಸ್ವಪಕ್ಷೀಯರಿಂದಲೇ ಭಿನ್ನವಾದ ಅಭಿಪ್ರಾಯ ಪ್ರಕಟವಾಗುತ್ತಿದೆ ಎಂದು ಶಶಿ ತರೂರ್ ತಿಳಿಸಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನವನ್ನು ಬೆಂಬಲಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮದೇ ಪಕ್ಷದ ಸಂಸದ ಶಶಿ ತರೂರ್ ಅವರು ಪದೇ ಪದೆ ಹೊಗಳುತ್ತಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ಹೊಗಳದಂತೆ ಶಶಿ ತರೂರ್ ಗೆ ಕಾಂಗ್ರೆಸ್ ಕಠಿಣ ಎಚ್ಚರಿಕೆ ನೀಡಿತ್ತು.
ಕೇರಳ ಕಾಂಗ್ರೆಸ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶಶಿ ತರೂರ್ ಎನ್.ಡಿ.ಟಿ.ವಿಗೆ ಪ್ರತಿಕ್ರಿಯಿಸಿದ್ದು ತಾವು ತಡವಾಗಿ ರಾಜಕೀಯ ಜೀವನ ಆರಂಭಿಸಿರುವುದರಿಂದ ಹಾಗೂ ರಾಜಕೀಯ ರಂಗಕ್ಕೆ ಹೊರಗಿನವನೆಂದು ಪರಿಗಣಿಸಿ ಸ್ವಪಕ್ಷೀಯರೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.