ಕಾಶ್ಮೀರ : ಜಮ್ಮು-ಕಾಶ್ಮೀರ ಗಡಿಯಲ್ಲಿ ಕ್ಯಾತೆ ಮುಂದುವರೆಸಿರುವ ಪಾಕಿಸ್ತಾನ ಕಳೆದೆರಡು ದಿನಗಳಿಂದ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದೆ.
ಪಾಕ್ ಸೇನೆಯ ಈ ಕೃತ್ಯಕ್ಕೆ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಭಾರತೀಯ ಸೇನೆ ದಾಳಿಗೆ ತನ್ನ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ.
ಇದೇ ವೇಳೆ ಭಾರತದ ಗಡಿಯೊಳಗೆ ನುಗ್ಗಲು 2000 ಉಗ್ರರು ಕಾಶ್ಮೀರದ ಗಡಿಯಲ್ಲಿ ಜಮಾವಣೆಗೊಂಡಿದ್ದು, ಒಳನುಸುಳಲು ಸಜ್ಜಾಗಿ ನಿಂತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಸೇನೆಯ ಸಮವಸ್ತ್ರದಲ್ಲಿರುವ ಉಗ್ರರು, ಯಾವುದೇ ಕ್ಷಣದಲ್ಲಾದರೂ ಭಾರತದ ಗಡಿಯಲ್ಲಿ ಒಳನುಸುಳಬಹುದು ಎಂದು ಎಚ್ಚರಿಕೆ ನೀಡಿದೆ.
ಚಳಿಗಾಲದಲ್ಲಿ ಭಾರೀ ಹಿಮಪಾತವಾಗುವ ಸಂದರ್ಭದಲ್ಲಿ ಬಿಎಸ್ ಎಫ್ ಯೋಧರ ಕಣ್ಣುತಪ್ಪಿಸಿ ನುಸುಳಿ ಬರುವ ಉದ್ದೇಶದಿಂದ ಉಗ್ರರು ಗಡಿಯಲ್ಲಿ ನೆಲೆಯಾಗಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಪಾಕ್ ಐಎಸ್ ಐ, ಉಗ್ರರನ್ನು ಅಕ್ರಮವಾಗಿ ಕಳುಹಿಸುತ್ತಿದೆ.ಇವರಿಗೆ ಪಾಕ್ ಸೇನೆಯ ನೆರವು ಲಭಿಸಿದೆ.
ಹೆಚ್ಚಿನ ಉಗ್ರರು ಪಾಕ್ ಸೇನೆಯ ಸಮವಸ್ತ್ರ ಧರಿಸಿ ಓಡಾಡುತ್ತಿದ್ದಾರೆ. ಪೂಂಚ್, ಗುಲ್ ಮಾರ್ಗ್, ಮೆಂಡಾರ್ ಸೆಕ್ಟರ್ ಮತ್ತಿತರಕಡೆ ಉಗ್ರರು ಬೀಡುಬಿಟ್ಟಿರುವುದು ಕಂಡುಬಂದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಾರತದಲ್ಲಿ ಕಾಲ ಬದಲಾಗಿದೆ ಎಂಬ ವಾಸ್ತವವನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ್ ಅರುಣ್ ಜೇಟ್ಲಿ, ಕದನ ವಿರಾಮ ಉಲ್ಲಂಘನೆಯಿಂದ ಭಾರತದ ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ. ತಾನು ಸೃಷ್ಟಿಸುತ್ತಿರುವ ವಾತಾವರಣದಿಂದ ಉಭಯ ದೇಶಗಳ ನಡುವಣ ಬಾಂಧ್ಯವ್ಯ ವೃದ್ಧಿಯಾಗುವುದಿಲ್ಲ, ಎಂಬುದನ್ನು ಪಾಕಿಸ್ತಾನ ಮನಗಾಣಬೇಕು. ಭಾರತದ ಸಶಸ್ತ್ರಪಡೆಗಳು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದು, ಪಾಕ್ ನ ಪ್ರಚೋದನೆಗೆ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.