ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು ಅರ್ಜುನ ಹೊರಲಿರುವ 750 ಕೆ.ಜೆ. ತೂಕದ ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿ.ಎಂ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತು ಸಾಗುವ ಜಂಬೂ ಸವಾರಿ ವೀಕ್ಷಿಸಲು ದೇಶ-ವಿದೇಶದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿದ್ದಾರೆ.
ಜಂಬೂ ಸವಾರಿಗೂ ಮುನ್ನ, ಸ್ತಬ್ಥ ಚಿತ್ರಗಳು ಮತ್ತು ಕಲಾ ತಂಡಗಳ ಮೆರಮಣಿಗೆಗೆ ಚಾಲನೆ ನೀಡಲಾಯಿತು. ತೆರೆದ ಜೀಪಿನಲ್ಲಿ ಸವಾರಿ ಹೊರಟ ಸಿಎಂ, ಅರಮನೆಯ ಸುತ್ತಲಿರುವ ಜನರಿಗೆ ಕೈಬೀಸಿ ಶುಭಾಶಯ ಸಲ್ಲಿಸಿದರು. ಸಚಿವರಾದ ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಮುಂತಾದವರು ಸಿಎಂಗೆ ಸಾಥ್ ನೀಡಿದ್ದರು.
ಜಂಬೂಸವಾರಿ ನಂತರ ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಅವರು ಭಾಗವಹಿಸಲಿದ್ದಾರೆ.