ಕರ್ನಾಲ್ : ಹರ್ಯಾಣವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ನನಗೆ ಅಭಿವೃದ್ಧಿಮಾಡಲು ಅವಕಾಶ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಯಾಣ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಹರ್ಯಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಲ್ ನಲ್ಲಿ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ, ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹರ್ಯಾಣ ನನ್ನ ಸ್ವಂತ ಮನೆಯಿದ್ದಂತೆ, ಹರ್ಯಾಣ ನನಗೆ ಜೀವನ ಪಾಠ ಕಲಿಸಿದೆ. ಇಲ್ಲಿಗೆ ಬಂದಿದ್ದು ನನ್ನ ಸ್ವಂತ ಮನೆಗೆ ಬಂದಂತಾಗಿದೆ ಎಂದರು.
ಹರ್ಯಾಣವನ್ನು ಬದಲಿಸುವ ಸಮಯ ಈಗ ಬಂದಿದೆ. ರಾಜ್ಯದಲ್ಲಿ ಬದಲಾವಣೆ ತರಲು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ದಾನವೀರ ಕರ್ಣನ ಭೂಮಿಯಿಂದ ಪ್ರಚಾರ ಮಾಡುತ್ತಿದ್ದೇನೆ. ರಾಜನೈತಿಕ ಜೀವನ ಪಾಠವನ್ನು ಕಲಿಯಬೇಕಾಗಿದೆ. ಹರ್ಯಾಣದ ಋಣ ತೀರಿಸಲು ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು.
60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯಕ್ಕೆ ಏನೂ ಮಾಡಲಾಗಲಿಲ್ಲ, ಆದರೆ 60 ದಿನಗಳ ನನ್ನ ಕೆಲಸದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನಾನು ನಿಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ನಿಮಗೆ ಶಾಂತಿ, ಅಭಿವೃದ್ಧಿ ಬೇಕಾದರೆ ಬಿಜೆಪಿಗೆ ಮತ ನೀಡಿ ಎಂದರು.
ನಾನು ನಿಮ್ಮ ಸೇವೆ ಮಾಡಲು ಬಯಸುತ್ತಿದ್ದೇನೆ. ಆದರೆ ಇಲ್ಲಿಯ ಪೊಲೀಸ್ ಕೂಡ ನನ್ನ ಮಾತನ್ನು ಕೇಳುವುದಿಲ್ಲ, ಯಾಕೆಂದರೆ ಅವರು ಹರ್ಯಾಣ ಸರ್ಕಾರದ ಪೊಲೀಸ್, ಕಾರಣ ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಮೋದಿ, ನಾನು ನೇರವಾಗಿ ನಿಮ್ಮನ್ನು ತಲುಪಲು ಬಯಸುತ್ತಿದ್ದೇನೆ. ಈ ಚುನಾವಣೆ ಹರ್ಯಾಣದ ಭವಿಷ್ಯವನ್ನು ನಿರ್ಧರಿಸುತ್ತದೆ. ರಾಜ್ಯದಲ್ಲಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ತನ್ನಿ, ನನಗೆ ಹರ್ಯಾಣದ ಅಭಿವೃದ್ಧಿ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ನಾನು ರೈತರ ಜಮೀನುಗಳಿಗೆ ನೀರು ಬಿಡಲು ಬಯಸುತ್ತೇನೆ. ವಿದ್ಯುತ್ ಪೂರೈಕೆಯಾಗದೇ ರಾಜ್ಯದ ರೈತರು ಕಂಗಾಲಾಗಿದ್ದಾರೆ. ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು. ಬಡವರಿಗಾಗಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತರಲಾಗಿದೆ. ಇನ್ನು ಮುಂದೆ ಬಡವರು ಸಾಹುಕಾರರ ಬಳಿ ಸಾಲ ಕೇಳಬೇಕಾಗಿಲ್ಲ. ಬ್ಯಾಂಕ್ ನಿಂದ ಬಡವರು ಸಾಲಪಡೆಯಬಹುದಾಗಿದೆ ಎಂದರು.
ಹರ್ಯಾಣವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಾಗಿದೆ ಎಂದ ಪ್ರಧಾನಿ ಮೋದಿ, ಕರ್ನಾಲ್ ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲಾಗುವುದು. ಬಲಿಷ್ಠ ಸರ್ಕಾರದಿಂದ ವಿಶ್ವದಲ್ಲಿ ಭಾರತದ ಗೌವರ ಹೆಚ್ಚಲಿದೆ ಎಂದು ತಿಳಿಸಿದರು.