ಮುಂಬೈ : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು ಸರ್ಕಾರಿ ಸ್ವಾಮ್ಯದ ದೂರದರ್ಶನ ಅ.3ರಂದು ಪ್ರಸಾರ ಮಾಡಿರುವುದು ದೇಶಾದ್ಯಂತ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ನಾಗ್ಪುರದಲ್ಲಿರುವ ಆರ್.ಎಸ್.ಎಸ್ ಕೇಂದ್ರ ಕಚೇರಿಯಲ್ಲಿ ವಿಜಯದಶಮಿ ಆಚರಣೆ ವೇಳೆ ಭಾಷಣ ಮಾಡಿದ್ದರು. ಅವರ ಭಾಷಣವನ್ನು ದೂರದರ್ಶನ ನೇರ ಪ್ರಸಾರ ಮಾಡಿತ್ತು. ಇದಕ್ಕೆ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೆಲ ಇತಿಹಾಸಕಾರರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಡಿಯಲ್ಲಿ ಪ್ರಸಾರವಾದ ಭಾಷಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚಂದ್ರ ಗುಹಾ ಅವರು, ಆರ್.ಎಸ್.ಎಸ್ ಒಂದು ಹಿಂದೂ ಪರ ಸಂಘಟನೆ. ಧಾರ್ಮಿಕ ಸಂಘಟನೆಗೆ ಸಂಬಂಧಿಸಿದ ಭಾಷಣವನ್ನು ಸಾರ್ವಜನಿಕ ಪ್ರಸಾರಕ ದೂರದರ್ಶನ ನೇರ ಪ್ರಸಾರ ಮಾಡಿದರೆ ಮುಂದೆ ಇತರ ಧರ್ಮದವರು ಸಹ ತಮ್ಮ ಭಾಷಣವನ್ನು ಪ್ರಸಾರ ಮಾಡಿ ಎಂದು ಪಟ್ಟು ಹಿಡಿಯಬಹುದು. ಇದು ಅಪಾಯಕಾರಿ ಬೆಳವಣಿಗೆ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.
ದೂರದರ್ಶನ ಸಾರ್ವಜನಿಕರ ಹಣದಲ್ಲಿ ನಡೆಯುತ್ತಿರುವ ಸರ್ಕಾರಿ ಸಂಸ್ಥೆ. ಅದನ್ನು ಸರ್ಕಾರ ಆರ್.ಎಸ್.ಎಸ್ ಮುಖ್ಯಸ್ಥರ ಭಾಷಣದ ಪ್ರಸಾರಕ್ಕೆ ಬಳಸಿಕೊಂಡಿದ್ದು ಏಕೆ? ಎಂದು ಕಾಂಗ್ರೆಸ್ ನಾಯಕ ರಶಿದ್ ಅಲ್ವಿ ಅವರು ಪ್ರಶ್ನಿಸಿದ್ದಾರೆ.