Mangalore : ತೊಟ್ಟಿಲ ಮಗುವಿನೊಂದಿಗೆ ಬಂದ ಮಡದಿಗೆ ಅವಮಾನ ಮಾಡಿದ ಕಾಂತು ಪೂಂಜನಿಗೆ ಬರ ಹೇಳಿ ಹೊರನಡೆದು ಸ್ವಾಭಿಮಾನ ಮೆರೆದು, ಅನೇಕ ಸಂಕಷ್ಟಗಳ ನಡುವೆಯೂ ಇನ್ನೊಂದು ವಿವಾಹವಾದ ಸತ್ಯನಾಪುರದ ಸಿರಿ ಕೇವಲ ತುಳುವರಿಗೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ ಸ್ತ್ರೀ ಎಂದು "ಕರಾವಳಿಯ ಮಾತೃ ಮೂಲೀಯ ಸಮುದಾಯಗಳು ಅಂದು –ಇಂದು –ಮುಂದು" ವಿಚಾರ ಸಂಕಿರಣದಲ್ಲಿ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತಿಳಿಸಿದರು.
ಹಿಂದಿನದು ಎನ್ನುವ ಕಾರಣಕ್ಕೆ ಯಾವುದೂ ಶ್ರೇಷ್ಠ ವಲ್ಲ .ಇಂದಿನದು ಎನ್ನುವ ಕಾರಣಕ್ಕೆ ಯಾವುದೂ ಕೆಟ್ಟದಲ್ಲ ,ಒಳಿತು ಕೆಡುಕನ್ನು ಪರೀಕ್ಷಿಸಿಯೇ ತಿಳಿಯಬೇಕು ಎಂದು ಕವಿ ಕಾಳಿದಾಸ ಹೇಳಿದ್ದಾನೆ. ಪ್ರಾಚೀನ ತುಳುವ ಸ್ತ್ರೀಯರ ಆಚಾರ ವಿಚಾರಗಳು ,ಸ್ಥಾನ ಮಾನ, ಬದುಕು ಬವಣೆಗಳು ತುಳು ಪಾಡ್ದನ ಗಳಲ್ಲಿ ಅನಾವರಣಗೊಂಡಿವೆ. ಮಾತೃಮೂಲೀಯ ವ್ಯವಸ್ಥೆ ಬಳಕೆಯಲ್ಲಿದ್ದ ತುಳುನಾಡಿನಲ್ಲಿಯೂ ಸ್ತ್ರೀಯರ ಮೇಲಿನ ದೌರ್ಜನ್ಯ ಏನೂ ಕಡಿಮೆ ಇರಲಿಲ್ಲ .ಹಾಗಿದ್ದರೂ ದೌರ್ಜನ್ಯವನ್ನು ವಿರೋಧಿಸಿ ಸೆಟೆದು ನಿಂತ ಬಳಜೇಯಿ ಮಾನಿಗ .ಸತ್ಯನಾಪುರದ ಸಿರಿ ,ಪರತಿ ಮಂಗನೆ ಮೊದಲಾದ ಅನೇಕ ಸ್ತ್ರೀಯರು ಸ್ತ್ರೀ ಸಮುದಾಯಕ್ಕೆ ಮಾದರಿಯಾಗಿ ನಿಂತು ಇಂದಿನ ಸ್ತ್ರೀಯರು ದೌರ್ಜನ್ಯವನ್ನು ಅಸಮಾನತೆಯನ್ನು ಮೆಟ್ಟಿ ನಿಂತು ಸಾಗಬೇಕಾದ ಹಾದಿಯತ್ತ ಬೆಳಕು ತೋರಿದ್ದಾರೆ ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಅವರು ನುಡಿದರು.
ತುಳುನಾಡಿನ ಜನಪದ ಆಟಗಳು ಮತ್ತು ಕ್ರೀಡೆಗಳಲ್ಲಿರುವ ಮಾತೃ ಮೂಲೀಯ ಮೌಲ್ಯಗಳು ಎಂಬ ವಿಷಯದಲ್ಲಿ ಡಾ.ಗಣನಾಥ ಎಕಾರು ಅವರು ಸಂಪ್ರಬಂಧವನ್ನು ಮಂಡಿಸಿದರು ,ಕರಾವಳಿ ಮಾತೃ ಮೂಲೀಯ ಸಮುದಾಯಗಳಲ್ಲಿ ಬಂಧುತ್ವ ,ವಿಧಿ ನಿಷೇಧಗಳು ಹಾಗೂ ಭಾವನಾತ್ನಕ ಸಂಬಂಧಗಳು ಎಂಬ ಸಂಪ್ರಬಂಧವನ್ನು ಡಾ.ದುಗ್ಗಪ್ಪ ಕಜೆಕಾರ್ ಮಂಡಿಸಿದರು.ಹಿರಿಯ ಸಾಹಿತಿಗಳಾದ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
27-09-20 14 ಮತ್ತು 28-09-2014 ರಂದು ಮಂಗಳೂರಿನ ನಂತೂರಿನಲ್ಲಿರುವ ಎಸ್. ಒ. ಡಿ. ಪಿ.ಯಲ್ಲಿ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್,ಉಡುಪಿ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ,ಮತ್ತು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಕರಾವಳಿಯ ಮಾತೃ ಮೂಲೀಯ ಸಮುದಾಯಗಳು ಅಂದು –ಇಂದು –ಮುಂದು ಎಂಬ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜಾನಕಿ ಬ್ರಹ್ಮಾವರ ಅವರು ಮಾಡಿದರು.