ನವದೆಹಲಿ : ಭಾರತೀಯರು ವಿಶೇಷ ಕೌಶಲ್ಯ ಹಾಗೂ ಜ್ನಾನದಿಂದ ಆಶೀರ್ವದಿಸಲ್ಪಟ್ಟಿದ್ದಾರೆ. 120ಕೋಟಿ ಭಾರತೀಯರು ತಮ್ಮ ಶಕ್ತಿಯನ್ನು ಅರಿತರೆ ದೇಶ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಥಮ ಬಾರಿಗೆ 'ಮನ್ ಕಿ ಬಾತ್' ಕಾರ್ಯಕ್ರಮದ ಮೂಲಕ ಆಲ್ ಇಂಡಿಯಾ ರೇಡಿಯೋದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು, ಆಕಾಶವಾಣಿ ಮೂಲಕ ದೇಶದ ಜನತೆಗೆ ವಿಜಯ ದಶಮಿಯ ಶುಭಾಶಯಗಳನ್ನು ಕೋರಿದ್ದಾರೆ.
ದೇಶದ ಜನತೆಗೆ ನನ್ನ ಮನಸ್ಸಿನ ಮಾತು ಹೇಳಲು ಬಯಸುತ್ತೇನೆ. ಮುಂದಿನ ಭಾನುವಾರವೂ ನಾನು ರೇಡಿಯೋದಲ್ಲಿ ನಿಮ್ಮೊಂದಿಗೆ ಮಾತನಾಡುತ್ತೇನೆ ಮತ್ತು ಸಾಧ್ಯವಾದರೇ ತಿಂಗಳಲ್ಲಿ ಎರಡು ಬಾರಿ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಲು ಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೌಶಲ್ಯಕ್ಕೆ ಕೊರತೆ ಇಲ್ಲ. ಕೊರತೆ ಇರುವುದು ನಮ್ಮ ಶಕ್ತಿಯನ್ನು ಅರಿತುಕೊಳ್ಳುವಲ್ಲಿ, ನಾವು ನಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕಿದೆ ಎಂದು ದೇಶದ ಜನತೆಗೆ ಮೋದಿ ಕರೆ ನೀಡಿದ್ದಾರೆ.
'ಸ್ವಚ್ಛ ಭಾರತ' ಗಾಂಧೀಜಿ ಅವರು ಕಂಡ ಕನಸು. ಈ ಅಂದೋಲನ ಯಶಸ್ವಿಯಾಗಬೇಕಾದರೆ ಎಲ್ಲರೂ ನಿರ್ಮಲ ಭಾರತದ ಪ್ರತಿಜ್ಞೆ ಮಾಡಬೇಕು ಮತ್ತು ಇಂದು ಪ್ರತಿಯೊಬ್ಬರು ಕೊಳೆಯನ್ನು ನಾಶಮಾಡುವ ಮೂಲಕ ವಿಜಯದಶಮಿ ಯನ್ನು ಆಚರಿಸಿ ಎಂದು ಮೋದಿ ಹೇಳಿದ್ದಾರೆ.
123ಕೋಟಿ ಜನರಿಗೂ ಸೇರಿರುವ ದೇಶ, ಎಲ್ಲರೂ ಒಗ್ಗಟ್ಟಿನಿಂದ ದೇಶದ ಭವಿಷ್ಯವನ್ನು ರೂಪಿಸುವ ಸಂಕಲ್ಪ ಮಾಡೋಣ ಎಂದು ಪ್ರಧಾನಿ ದೇಶದ ಜನತೆಗೆ ಕರೆ ನೀಡಿದ್ದಾರೆ.