ಮುಂಬೈ : ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಷ್ಟ್ರೀಯ ಹಿತದೃಷ್ಠಿಯಿಂದ ಅಭಿವೃದ್ಧಿ ಪರವಾಗಿ ಕೆಲಸ ನಿರ್ವಹಿಸಲಿದೆಯೇ ಹೊರತು ಯಾವುದೇ ನಿರ್ದಿಷ್ಠ ಕೋಮಿನ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅ.3ರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡು ಮಾತನಾಡಿದ ನಿತಿನ್ ಗಡ್ಕರಿ, ವೈರಿಗಳು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೋಮುವಾದದ ರಾಜಕಾರಣ ಮಾಡುತ್ತಿಲ್ಲ. ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಬಿಜೆಪಿ ಕೋಮುವಾದದ ರಾಜಕಾರಣ ಮಾಡುತ್ತಿದೆ ಎಂದನಿಸಿದಲ್ಲಿ ಯಾರೂ ಬಿಜೆಪಿಗೆ ಮತ ನೀಡಬೇಡಿ ಆದರೆ ಅದಕ್ಕೂ ಮುನ್ನ ಕಾಂಗ್ರೆಸ್ ನವರು ರಾಜ್ಯದ ಜನತೆಗೆ ತೊಡಿಸಿರುವ ಸೆಕ್ಯುಲರಿಸಂ ಎಂಬ ಕನ್ನಡಕವನು ಕಿತ್ತೊಗೆದು ಬಿಜೆಪಿ ಮಾಡಿರುವ ಅಭಿವೃದ್ಧಿಯನ್ನು ತೆರೆದ ಕಣ್ಣಿನಿಂದ ಗುರುತಿಸಿ ಎಂದು ಗಡ್ಕರಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅತ್ತ ಪಾಕಿಸ್ತಾನದವರು ಭಾರತದಲ್ಲಿ ಹಿಂದೂ ಮುಸ್ಲಿಮರಲ್ಲಿರುವ ಸಾಮರಸ್ಯವನ್ನು ಹಾಳುಗೆಡವುತ್ತಿದ್ದಾರೆ. ಯುದ್ಧದಲ್ಲಿ ಪದೇ ಪದೇ ಸೋತರೂ ಬುದ್ದಿ ಕಲಿಯದ ಪಾಕಿಸ್ತಾನ, ಕುತಂತ್ರ ರೂಪಿಸುತ್ತಿದೆ ಎಂದು ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನರೇಂದ್ರ ಮೋದಿ ಮುಸ್ಲಿಂ ದ್ವೇಷಿಯಾಗಿದ್ದರೆ ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ 100 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡುತ್ತಿರಲಿಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗಡ್ಕರಿ 'ಮಹಾ'ಜನತೆಗೆ ಕರೆ ನೀಡಿದ್ದಾರೆ.
ಆಹ