ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ.
ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಶೇಷ ಪೀಠ, ಅ.6ಕ್ಕೆ ವಿಚಾರಣೆ ಮುಂದೂಡಿ ಆದೇಶ ನೀಡಿದೆ. ಹೀಗಾಗಿ ಜಯಲಲಿತಾ ಇನ್ನೂ ನಾಲ್ಕುದಿನಗಳ ವರೆಗೆ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹಾಗೂ ಜಾಮೀನು, ತೀರ್ಪು ರದ್ದು ಕೋರಿ ಜಯಲಲಿತಾ ಪರ ವಕೀಲರು ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸೆ.30ರಂದು ವಿಚಾರಣೆ ನಡೆಸಿದ ಹೈಕೋರ್ಟ್ ರಜಾಕಾಲದ ಪೀಠ ಅ.6ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಆದರೆ ಜಯಲಲಿತಾ ಪರ ವಾದ ಮಂಡಿಸುತ್ತಿರುವ ರಾಮ್ ಜೇಠ್ಮಲಾನಿ ಸಲಹೆ ಮೇರೆಗೆ ರಿಜಿಸ್ಟ್ರಾರ್ ಜ್ಯುಡಿಷಿಯಲ್, ಹೈಕೋರ್ಟ್ ಮುಖ್ಯನ್ಯಾ.ಡಿ.ಹೆಚ್ ವಘೇಲಾ ಅವರಿಗೆ ಮನವಿ ಮಾಡಿ, 10 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ಜಾಮೀನು ನೀಡುವ ಅಧಿಕಾರ ಹೈಕೋರ್ಟ್ ಗೆ ಇದೆ. ಅ.1ರಂದೇ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದು ಹೈಕೋರ್ಟ್ ವಿಷೇಷ ಪೀಠದಿಂದ ವಿಚಾರಣೆಗೆ ಒಪ್ಪಿಗೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ರತ್ನಕಲಾ ಅವರನ್ನೊಳಗೊಂಡ ಹೈಕೋರ್ಟ್ ವಿಷೇಷ ಪೀಠ, ಮೇಲ್ಮನವಿ ಸಂಪೂರ್ಣ ವಿಚಾರಣೆ ಅಗತ್ಯವಿದೆ. ರಜಾಕಾಲದ ಪೀಠವದಿಂದ ಸಂಪೂರ್ಣ ವಿಚಾರಣೆ ಸಾಧ್ಯವಿಲ್ಲ. ಸಾಮಾನ್ಯ ಪೀಠದಿಂದ ಮಾತ್ರ ಸಂಪೂರ್ಣ ವಿಚಾರಣೆ, ಪರಿಶೀಲನೆ ಸಾಧ್ಯ. ಹಾಗಾಗೊ ಸಾಮಾನ್ಯ ಪೀಠದಿಂದ ವಿಚಾರಣೆ ನಡೆಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಅಭಿಯೋಜಕರಾಗಿ ಭವಾನಿ ಸಿಂಗ್ ಅವರರೇ ಮುಂದುವರೆದಿದ್ದು, ಈ ವೇಳೆ ಜಯಲಲಿತಾ ಮೇಲ್ಮನವಿ ಅರ್ಜಿ ಬಗ್ಗೆ ಆಕ್ಷೇಪಣೆ ಇದೆಯೇ ಎಂದು ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದಾಗ, ಆಕ್ಷೇಪಣೆಯಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ಭವಾನಿ ಸಿಂಗ್ ತಿಳಿಸಿದರು.
ಈ ಎಲ್ಲಾ ಕಾರಣಗಳಿಂದ ರಜಾಕಾಲದ ಪೀಠದಿಂದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸಂಪೂರ್ಣವಾಗಿ ನಡೆಸಲು ಸಾಧ್ಯವಿಲ್ಲ, ಸೋಮವಾರದವರೆಗೆ ಮಾತ್ರ ರಜಾಕಾಲದ ಪೀಠ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಸಾಮಾನ್ಯಪೀಠದಿಂದ ಮಾತ್ರ ಮೇಲ್ಮನವಿ ಅರ್ಜಿಯ ಸಂಪೂರ್ಣ ವಿಚಾರಣೆ ಸಾಧ್ಯ. ಆದ್ದರಿಂದ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆಯನ್ನು ಅ.6ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.