ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ಅ.6ಕ್ಕೆ ಮುಂದೂಡಲಾಗಿದೆ.
ತಮ್ಮ ವಿರುದ್ಧದ ಶಿಕ್ಷೆ ರದ್ದು ಹಾಗೂ ತಮಗೆ ಜಾಮೀನು ನೀಡುವಂತೆ ಕೋರಿ ಜಯಲಲಿತಾ ಸೆ.29ರಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಜಾಕಾಲದ ಪೀಠ ಸರ್ಕಾರಿ ಅಭಿಯೋಜಕರ ಬಗ್ಗೆ ಗೊಂದಲವಿರುವ ಹಿನ್ನಲೆಯಲ್ಲಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಜಯಲಲಿತಾ ಪರ ವಾದ ಮಂಡಿಸಿದ ರಾಮ್ ಜೇಠ್ಮಲಾನಿ, ಅಪರಾಧಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿರುವ ಹಿನ್ನಲೆಯಲ್ಲಿ ಪ್ರತಿವಾದಿಯ ಅಗತ್ಯವಿಲ್ಲ, ಅಪರಾಧಿಗೆ ಜಾಮೀನು ನೀಡಬಹುದು ಎಂದು ವಾದ ಮಂಡಿಸಿದರು. ಆದರೆ ಜಯಲಲಿತಾ ಪರ ವಕೀಲರ ವಾದವನ್ನು ಒಪ್ಪದ ಹೈಕೋರ್ಟ್ ರಜಾಕಾಲದ ಪೀಠ, ಪ್ರತಿವಾದಿಯೇ ಇಲ್ಲದೇ ಜಾಮೀನು ನೀಡಲಾಗದು ಎಂದು ತಿಳಿಸಿದೆ.
ಅಲ್ಲದೇ ವಿಶೇಷ ನ್ಯಾಯಾಲಯದಲ್ಲಿ ಭವಾನಿ ಸಿಂಗ್ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದರು.( ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದ ಬಿ.ವಿ.ಆಚಾರ್ಯ ರಾಜೀನಾಮೆ ಬಳಿಕ) ಈಗ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟವಾದ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಗೂ ಭವಾನಿ ಸಿಂಗ್ ಅವರನ್ನೇ ಸರ್ಕಾರಿ ಅಭಿಯೋಜಕರಾಗಿ ಮುಂದುವರೆಸಬೇಕೋ ಅಥವಾ ಬೇರೆಯವರನ್ನು ನೇಮಕ ಮಾಡಬೇಕೋ ಎಂಬ ಬಗ್ಗೆ ಗೊಂದಲವಿದೆ ಎಂದು ಹೇಳಿರುವ ನ್ಯಾಯಾಲಯ ಅ.6ಕ್ಕೆ ವಿಚಾರಣೆಯನ್ನು ಮುಂದೂಡಿತು.
ಈ ವೇಳೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಭವಾನಿ ಸಿಂಗ್, ಸರ್ಕಾರಿ ಅಭಿಯೋಜಕರಾಗಿ ಮುಂದುವರೆಯುವ ಬಗ್ಗೆ ಅಧಿಸೂಚನೆ ಪ್ರತಿ ನನಗೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಹೊಸ ಅಭಿಯೋಜಕರ ನೇಮಕ ವಿಚಾರದಲ್ಲಿ ಗೊಂದಲವಿರುವ ಹಿನ್ನಲೆಯಲ್ಲಿ ಹೈಕೋರ್ಟ್ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಕೂಡಲೇ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಸೂಚಿಸಿದೆ.
ಈ ನಿಟ್ಟಿನಲ್ಲಿ ಜಯಲಲಿತಾ ಇನ್ನೂ 6 ದಿನಗಳವರೆಗೆ ಜೈಲಿನಲ್ಲಿಯೇ ಕಾಲಕಳೆಯಬೇಕಾಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಸೆ.27ರಂದು ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ ದಂಡ ವಿಧಿಸಿತ್ತು.