ಚೆನ್ನೈ : ನ್ಯಾಯಾಲಯದ ಆದೇಶವನ್ನು ಪಾಲಿಸದ ಡಿಆರ್ಡಿಒದ ಇಬ್ಬರು ವಿಜ್ನಾನಿಗಳಿಗೆ ಚೆನ್ನೈ ಹೈಕೋರ್ಟ್ ಜೈಲುಶಿಕ್ಷೆ ವಿಧಿಸಿದೆ.
ರಕ್ಷಣಾ ಸಚಿವಾಲಯದ ವೈಜ್ನಾನಿಕ ಸಲಹೆಗಾರ ಮತ್ತು ಡಿಆರ್ಡಿಒದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮಹಾನಿರ್ದೇಶಕರಾಗಿರುವ ವಿ.ಕೆ. ಸರಸ್ವತ್ ಹಾಗೂ ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೋರೇಟರಿ(ಡಿಎಂಆರ್ಎಲ್)ಯ ನಿರ್ದೇಶಕ ಜಿ. ಮಾಲಕೊಂಡಯ್ಯ ಅವರಿಗೆ ಮೂರು ವಾರಗಳ ಜೈಲುಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಇಬ್ಬರು ವಿಜ್ನಾನಿಗಳು ಒಂದು ವಾರದೊಳಗೆ ಪೊಲೀಸರ ಮುಂದೆ ಶರಣಾಗಿ ಜೈಲುಶಿಕ್ಷೆ ಅನುಭವಿಸುವಂತೆ ಸೂಚಿಸಿದೆ. ಒಂದು ವೇಳೆ ವಿಜ್ನಾನಿಗಳಿಬ್ಬರು ಪೊಲೀಸರ ಮುಂದೆ ಶರಣಾಗದೆ ಇದ್ದರೆ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗುವುದು ಎಂದು ನ್ಯಾಯಾಲಯ ಬೆಚ್ಚರಿಸಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸದ ಹಾಗೂ ಅಜಾಗರೂಕ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ವಿಜ್ನಾನಿಗಳಿಬ್ಬರ ವಿರುದ್ಧ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶರಾದ ಎಸ್. ರಾಜೇಶ್ವರನ್ ಮತ್ತು ಪಿ.ಎನ್. ಪ್ರಕಾಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶಿಸಿದೆ.
ರಕ್ಷಣಾ ಸಚಿವಾಲಯಲದ ಅಧಿನದಲ್ಲಿರುವ ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಸಿವಿಆರ್ಡಿಇ)ಯಲ್ಲಿ ಆಗಸ್ಟ್ 13, 1985ರಲ್ಲಿ ಜೋಸೆಫ್ ರಾಜ್ ಎಂಬುವರಿಗೆ ಗುಮಾಸ್ತ ಮತ್ತು ಕಾವಲುಗಾರ ಹುದ್ದೆಯನ್ನು ನೀಡಲಾಗಿತ್ತು. ನಂತರ 2001ರಲ್ಲಿ ಸಿವಿಆರ್ಡಿಇಯನ್ನು ಮುಚ್ಚಿ ಸಿಬ್ಬಂದಿಗಳಿಗೆ ಟರ್ಮಿನೇಷನ್ ನೋಟಿಸ್ಸ್ಗಳನ್ನು ನೀಡಲಾಗಿತ್ತು.
ಇದರಿಂದಾಗಿ ಜೋಸೆಫ್ ರಾಜ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸಹ ಜೋಸೆಫ್ ರಾಜ್ಗೆ ಬೇರೆ ಯೂನಿಟ್ನಲ್ಲಿ ಯಾವುದಾದರೊಂದು ಕೆಲಸ ನೀಡುವಂತೆ ಆದೇಶಿಸಿತ್ತು. ಆದರೆ ಈ ಆದೇಶವನ್ನು ಇಬ್ಬರು ವಿಜ್ನಾನಿಗಳು ಪರಿಪಾಲಿಸದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.