ತುಮಕೂರು : ಕೃಷಿ ಕ್ಷೇತ್ರದಲ್ಲಿ ವೈಜ್ನಾನಿಕ ಯೋಜನೆ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪಾದನೆ, ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತುಮಕೂರಿನ ವಸಂತನರಸಾಪುರದಲ್ಲಿ ದೇಶದ ಅತಿ ದೊಡ್ಡ ಮೆಗಾಫುಡ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಮಾತನಾಡಿದ ಅವರು, ಆಹಾರ ಸಂಸ್ಕರಣೆ ದೇಶಕ್ಕೆ ಹೊಸತಲ್ಲ, ಆದರೆ ಇದನ್ನು ವೈಜ್ನಾನಿಕವಾಗಿ ಮಾಡಬೇಕಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು.ರಾಜ್ಯದ ಅವಶ್ಯಕತೆ ಬಗ್ಗೆ ಕೇಂದ್ರ ತಿಳಿದಿರಬೇಕು. ಕೇಂದ್ರದ ಯೋಜನೆಗಳನ್ನು ರಾಜ್ಯಗಳು ಜಾರಿಗೆ ತರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಕಾರದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇಂದು ಮೆಗಾಫುಡ್ ಪಾರ್ಕ್ ಉದ್ಘಾಟನೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸ್ಥಳೀಯ ಸಂಸ್ಥೆಗಳ ಸಹಕಾರ ಕಾರಣವಾಗಿದೆ. ರಾಜ್ಯ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳು ಶಕ್ತಿಶಾಲಿಯಾದರೆ, ಕೇಂದ್ರ ಶಕ್ತಿಶಾಲಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರ ಎಂದು ಹೇಳಲಾಗುತ್ತದೆ. ಆದರೆ ಇಂದು ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತರ ಸ್ಥಿತಿ ಏನಾಗಿದೆ?. ದೇಶದಲ್ಲಿ ರೈತರು ಸುಖವಾಗಿಲ್ಲ, ಇಡೀ ಜಗತ್ತಿನ ಹೊಟ್ಟೆ ತುಂಬಿಸುವ ರೈತರ ಜೇಬು ಇಂದು ಖಾಲಿಯಾಗಿದೆ. ವೈಜ್ನಾನಿಕ ಕೃಷಿಯಿಂದ ರೈತನ ಜೇಬು ತುಂಬಲು ಸಾಧ್ಯ ಎಂದರು.
ಒಂದು ಕಾಲದಲ್ಲಿ ನಮ್ಮ ದೇಶದ ಸಾಂಬಾರ ಪದಾರ್ಥ ವಿಶ್ವದಲ್ಲಿಯೇ ಹೆಚ್ಚು ಪ್ರಸಿದ್ಧಿಯಾಗಿತ್ತು, ರೈತರಿಗೆ ಬೇಕಾಗಿರುವುದು ಸಂಗ್ರಹಿಸಲು ಗೋದಾಮು ಮತ್ತು ಉತ್ಪನ್ನ ಮಾರುಕಟ್ಟೆ. ನಾವು ಕೃಷಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಗ್ರಾಮದ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಕೃಷಿ ಕ್ಷೇತ್ರದಲ್ಲಿ ವೈಜ್ನಾನಿಕ ಯೋಜನೆಗಳನ್ನು ತರಬೇಕಿದೆ ಎಂದು ತಿಳಿಸಿದರು.
ಆಹಾರ ಸಂಸ್ಕರಣೆ ಭಾರತಕ್ಕೆ ಹೊಸದೇನಲ್ಲ, ನಮ್ಮ ಪೂರ್ವಜರು ಕೂಡ ಆಹಾರ ಸಂಸ್ಕರಣೆ ಮಾಡುತ್ತಿದ್ದರು. ಕಬ್ಬಿನ ರಸದಿಂದ ಬೆಲ್ಲ ತಯಾರಿಸುವುದು ಕೂಡ ಆಹಾರ ಸಂಸ್ಕರಣೆಯೇ. ಆದರೆ ಇದನ್ನು ವೈಜ್ನಾನಿಕವಾಗಿ ಮಾಡಬೇಕು ಎಂದು ತಿಳಿಸಿದರು.
ಇಂದು ವಿದೇಶಿ ಪಾನೀಯಗಳು ಕೋಟಿ ಕೋಟಿ ವ್ಯಾಪಾರವಾಗುತ್ತವೆ. ಇಂತಹ ಪಾನೀಯಗಳಲ್ಲಿ ಶೇ.5ರಷ್ಟು ರೈತರು ಬೆಳೆದ ಹಣ್ಣಿನ ರಸ ಬಳಕೆಯಾದರೆ ರೈತರಿಗೂ ಲಾಭವಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೆಪ್ಸಿ, ಕೊಕೋಕೋಲಾ ಕಂಪನಿಗಳ ಜತೆ ಚರ್ಚಿಸಿದ್ದೇನೆ. ಈ ಪಾನೀಯಗಳಲ್ಲಿ ಶೇ.5ರಷ್ಟು ಹಣ್ಣಿನ ರಸ ಬೆರೆಸುವ ಬಗ್ಗೆ ಹೇಳಿದ್ದೇನೆ. ಇದು ಸಾಧ್ಯವಾದರೆ ಹಣ್ಣು ಬೆಳೆಯುವ ರೈತರು ಕಷ್ಟಪಡಬೇಕಿಲ್ಲ ಎಂದರು.