ನವದೆಹಲಿ : ಗಂಗಾ ನದಿ ಶುದ್ಧೀಕರಣಕ್ಕೆ 18ವರ್ಷಗಳು ಬೇಕು ಎಂದು ಸ್ವತ: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗಂಗಾ ನದಿ ಶುದ್ಧೀಕರಣಕ್ಕೆ ಕಿರು, ಮಧ್ಯಮ ಮತ್ತು ದೀರ್ಘಾವಧಿ ಕ್ರಮಗಳ ನೀಲನಕಾಶೆಯನ್ನು ಸುಪ್ರೀಂ ಕೋರ್ಟ್ ಗೆ ಹಾಜರು ಪಡಿಸಿದ ಕೇಂದ್ರ ಸರ್ಕಾರ, ನದಿ ಸಂಪೂರ್ಣವಾಗಿ ಸ್ವಚ್ಛವಾಗಲು 18 ವರ್ಷ ಬೇಕಾಗಲಿದ್ದು, ಸಾವಿರಾರು ಕೋಟಿ ರೂ ಖರ್ಚಾಗಲಿದೆ ಎಂದು ತಿಳಿಸಿದೆ.
ಗಂಗಾ ನದಿ ಶುದ್ಧೀಕರಣದ ಬಗ್ಗೆ ನೀವು ಮಾಡುತ್ತಿರುವ ಕಾರ್ಯವೈಖರಿ ನೋಡಿದರೆ 200 ವರ್ಷ ಕಳೆದರೂ ಗಂಗಾ ನದಿ ಶುದ್ಧೀಕರಣ ಯೋಜನೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಯೋಜನೆಯ ಕುರಿತು ಸ್ಪಷ್ಟ ಚಿತ್ರಣಗಳನ್ನು ನ್ಯಾಯಾಲಯಕ್ಕೆ ನೀಡುವಂತೆ, ಹಂತ ಹಂತವಾಗಿ ವಿವರಿಸುವಂತೆ ಸೂಚಿಸಿತ್ತು. ಅಲ್ಲದೇ ಯೋಜನೆಗೆ ಅಗತ್ಯವಾದ ಅನುದಾನವನ್ನು ಹೇಗೆ ಸಂಗ್ರಹಿಸುತ್ತೀರಿ ಎಂಬುದರ ಬಗ್ಗೆ ವಿವರ ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಈ ಬಗ್ಗೆ ವಿವರ ನೀಡಿರುವ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಗಂಗಾ ತಟದಲ್ಲಿರುವ 118 ನಗರಗಳನ್ನು ಗುರುತಿಸಿ ತ್ಯಾಜ್ಯ ಮತ್ತು ಕೊಳಚೆ ನೀರು ನದಿಗೆ ಹರಿಯುವುದನ್ನು ತಡೆಯಬೇಕು. ಗಂಗಾ ಪುನರುತ್ಥಾನಕ್ಕೆ ಹಂತ ಹಂತವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. 3 ವರ್ಷದ ಕಿರು ಅವಧಿ, 5 ವರ್ಷಗಳ ಮಧ್ಯಮ ಅವಧಿ, 10 ಮತ್ತು ಅದಕ್ಕಿಂತ ಹೆಚ್ಚಿನ ಮರ್ಷದ ದೀರ್ಘಾವಧಿ ಯೋಜನೆಗಳ ಮೂಲಕ ಶುದ್ಧೀಕರಣ ಮಾಡಲಾಗುತ್ತದೆ ಎಂದು ಹೇಳಿದೆ.
2500 ಕಿ.ಮೀ ಗಂಗಾ ನದಿ ಹರಿಯುತ್ತದೆ. ಯೋಜನೆಯ ಮೊದಲ ಹಂತವಾಗಿ ಗಂಗಾ ನದಿಯ ತಟದಲ್ಲಿರುವ 118 ಹಳ್ಳಿಗಳು, ಪಟ್ಟಣಗಳನ್ನು ಗುರುತಿಸಲಾಗಿದೆ. ಇವುಗಳ ಸಂಪೂರ್ಣ ನಿರ್ಮಲೀಕರಣದ ಮೂಲಕ ಯೋಜನೆಗೆ ಚಾಲನೆ ನೀಡಲಾಗುವುದು. ಈ ಪ್ರದೇಶಗಳಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಮಾಡುವ ಮೂಲಕ ನದಿಗೆ ಕೊಳಚೆ ನೀರು ಸೇರದಂತೆ, ಯಾವುದೇ ತ್ಯಾಜ್ಯ ಸೇರದಂತೆ ನೋಡಿಕೊಳ್ಳಲಾಗುವುದು.
ಅಲ್ಲದೇ ಹರಿದ್ವಾರ, ವಾರಾಣಸಿ, ಖಾನ್ ಪುರ, ಅಲಹಾಬಾದ್, ಪಾಟ್ನಾ, ದೆಹಲಿಯ ಸ್ನಾನಘಟ್ಟಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದಿದೆ. ಎರಡನೇ ಹಂತವಾಗಿ ಈ 118 ನಗರಗಳಲ್ಲಿ ಕೊಳಚೆ ನೀರಿನ ಶುದ್ಧೀಕರಣ ಮಾಡಿ ಪುನರ್ ಬಳಕೆ ಮಾಡಲಾಗುವುದು. ಅಲ್ಲದೇ 1649 ಗ್ರಾಮ ಪಂಚಾಯತ್ ಗಳನ್ನು ಬಯಲು ಶೌಚಾಲಯ ಮುಕ್ತ ಪ್ರದೇಶಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಅಂದಾಜು 51 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಸರ್ಕಾರ ವಿವರಿಸಿದೆ.
ಕೊನೆ ಹಂತದಲ್ಲಿ 7 ಐಐಟಿಗಳು ಒಗ್ಗೂಡಿ ನಿರ್ಮಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು, ಗಂಗೆಯ ಶುದ್ಧೀಕರಣ ಸಂಪೂರ್ಣವಾಗಿ ಮಾಡಲಾಗುವುದು. ಬಹುರಾಷ್ಟ್ರೀಯ ಸಹಕಾರದೊಂದಿಗೆ, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.