ನವದೆಹಲಿ : ಭಾರತದ ಗಡಿಯಲ್ಲಿ ಬೀಡು ಬಿಟ್ಟಿರುವ ಚೀನಾ ಸೈನಿಕರಿಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ಪಾಲಿಸುವಂತೆ ಚೀನಾ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.
ಕಳೆದ 5 ದಿನಗಳಿಂದ ಭಾರತದ ಗಡಿ ಲಡಾಕ್ ನ ಚುಮುರ್ ಪ್ರಾಂತ್ಯದಲ್ಲಿ ಬೀಡು ಬಿಟ್ಟುರುವ ಚೀನಾ ಸೈನಿಕರು ತಕ್ಷಣ ಅಧ್ಯಕ್ಷರ ಆಜ್ನೆಯಂತೆ ಹಿಂದೆಸರಿಯುವಂತೆ ಚೀನಾ ರಕ್ಷಣಾ ಇಲಾಖೆ ಸೂಚಿಸಿದೆ.
ಈ ಮೂಲಕ ಚೀನಾದ ರಕ್ಷಣಾ ಖಾತೆಯ ಸರ್ವೋಛ್ಚ ನಾಯಕನ ಮಾತನ್ನೇ ಅಲ್ಲಿಯ ಸೈನ್ಯ ಕೇಳುತ್ತಿಲ್ಲ ಎಂಬ ಗಂಭೀರ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತ ಭೇಟಿ ವೇಳೆ ಭಾರತದಲ್ಲಿ ಚೀನಾ ಸೈನಿಕರಿಂದಾಗುತ್ತಿರುವ ಗಡಿ ಅತಿಕ್ರಮಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಇದು ಮಾರಕ ಎಂದು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಸ್ಪಷ್ಟಮಾತುಗಳಲ್ಲಿ ತಿಳಿಸಿದ್ದರು.
ಈ ನಿಟ್ಟಿನಲ್ಲಿ ಕ್ಸಿ ಜಿನ್ ಪಿಂಗ್ ತಮ್ಮ ರೆಡ್ ಆರ್ಮಿಗೆ ಭಾರತದ ಗಡಿಯಿಂದ ತನ್ನ ಗಡಿ ಸರಹದ್ದಿಗೆ ಹಿಂದಿರುಗುವಂತೆ ಸೂಚನೆ ನೀಡಿದ್ದರು. ತಮ್ಮ ಅಧ್ಯಕ್ಷರ ಆದೇಶದ ಹೊರತಾಗಿಯೂ ಚೀನಾ ಸೈನಿಕರು ಭಾರತದ ಗಡಿಯಲ್ಲಿ ಬೀಡು ಬಿಟ್ಟಿದ್ದರು. ಈ ಹಿನ್ನಲೆಯಲ್ಲಿ ಚೀನಾ ರಕ್ಷಣ ಇಲಾಖೆ ಅಧ್ಯಕ್ಷ ಆಜ್ನೆ ಪಾಲಿಸುವಂತೆ ತಾಕೀತು ಮಾಡಿದೆ.
ಚೀನಾ ಸೇನೆಯ ಈ ಕ್ಯಾತೆಯಿಂದ ತೀವ್ರ ಅಸಮಾಧಾನಗೊಂಡ ಮೋದಿ ಸರಕಾರ ಉಭಯ ರಾಷ್ಟ್ರಗಳ ಮಾಧ್ಯಮ ಸಂವಾದವನ್ನು ಏಕಾಏಕಿ ರದ್ದು ಪಡಿಸಿ ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದೆ. ಈಗಾಗಲೇ ಚೀನಿ ಸಂಪಾದಕರಿಗೆ ಭಾರತ ಸರ್ಕಾರ ನೀಡಿದ್ದ ಪರವಾನಗಿಯನ್ನೂ ರದ್ದುಪಡಿಸಲಾಗಿತ್ತು. ಭಾರತದ ಕಠಿಣ ನಿಲುವಿನಿಂದ ಎಚ್ಚೆತ್ತ ಚೀನಾ ಸರ್ಕಾರ ಭಾರತದ ಗಡಿಯಿಂದ ತನ್ನ ಯೋಧರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.