ಮುಂಬೈ : ಅ.15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ನಾಮಪತ್ರ ಸಲ್ಲಿಸಲು ಸೆ.27 ಕೊನೆ ದಿನವಾಗಿದೆ.
ಅ.1 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಅ.19ರಂದು ಫಲಿತಾಂಶ ಘೋಷಣೆಯಾಗಲಿದೆ. ಹಾಲಿ ವಿಧಾನಸಭೆಯ ಅವಧಿ ನ.8ರಂದು ಮುಗಿಯಲಿದೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 29 ಮತ್ತು 25 ಸೀಟುಗಳನ್ನು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಡಲಾಗಿದೆ.
ಈ ನಡುವೆ ಬಿಜೆಪಿ ಹಾಗೂ ಶಿವಸೇನೆ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರೆದಿದೆ. ಶಿವಸೇನೆ ತನ್ನ ಪಟ್ಟು ಸಡಿಲಿಸಿದ್ದು, ಬಿಜೆಪಿಗೆ ಹೊಸ ಪ್ರಸ್ತಾವನೆ ಕಳುಹಿಸಿದೆ ಎನ್ನಲಾಗಿದೆ. ಆದರೆ ಇದನ್ನು ಅಲ್ಲಗಳೆದಿರುವ ಬಿಜೆಪಿ ಯಾವುದೇ ಪ್ರಸ್ತಾವನೆ ಪಕ್ಷದ ಮುಂದಿಲ್ಲ ಎಂದಿದೆ.
ಹೊಸ ಪ್ರಸ್ತಾವನೆ ಪ್ರಕಾರ ಶಿವಸೇನೆ 155 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿಗೆ 126 ಸ್ಥಾನಗಳನ್ನು ನೀಡಿದೆ. ಆದರೆ ಬಿಜೆಪಿ 135 ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿದಿದೆ. ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಇನ್ನು ಮುಂಬೈನಲ್ಲಿ ಶಿವಸೇನೆ ಕಾರ್ಯಾಕಾರಿಣಿ ಸಭೆ ನಡೆಯಲಿದೆ.
ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಎನ್ ಸಿಪಿ ನಡುವೆ ಸೀಟು ಹಂಚಿಕೆ ಕುರಿತು ಹಗ್ಗ ಜಗ್ಗಾಟ ಮುಂದುವರೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎನ್ ಸಿಪಿ 134 ಸ್ಥಾನಗಳ ಬೇಡಿಕೆ ಇಟ್ಟಿದೆ. ಸಧ್ಯ 124 ಸ್ಥಾನಗಳಲ್ಲಿ ಎನ್ ಸಿಪಿ ಸ್ಪರ್ಧಿಸಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ. ಆದರೆ ಎನ್ ಸಿಪಿ ಇನ್ನೂ 10 ಸ್ಥಾನಗಳ ಬೇಡಿಕೆಯಿಟ್ಟಿದೆ. ಒಂದು ವೇಳೆ ಕಾಂಗ್ರೆಸ್ ಒಪ್ಪದಿದ್ದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಎನ್ ಸಿಪಿ ಎಚ್ಚರಿಸಿದೆ.