ನವದೆಹಲಿ : ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಗಿಯುತ್ತಿದ್ದಂತೆಯೇ ಇತ್ತ ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಜಮಾವಣೆಯಾಗಿದ್ದ ಚೀನಾ ಸೈನಿಕರು ಭಾರತದಿಂದ ಕಾಲ್ಕಿತ್ತ ಘಟನೆ ದೇಶದ ಗಮನ ಸೆಳೆದಿದೆ.
ಚೀನಾ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ತಕ್ಷಣವೇ ಫಲಪ್ರದವಾದ ಅಂಶವೆಂದರೆ ಅದು ಗಡಿ ನಿಯಂತ್ರಣ ರೇಖೆ ಅತಿಕ್ರಮಿಸಿದ್ದ ಚೀನಾ ಸೈನಿಕರನ್ನು ಹೊರದಬ್ಬಿದ್ದು. ಜೊತೆಜೊತೆಗೇ ಚೀನಾ ವಿಷಯದಲ್ಲಿ ಭಾರತದ ಯಾವ ಪ್ರಧಾನಿಯೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಲು ಪ್ರಧಾನಿ ನರೇಂದ್ರ ಮೋದಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೂ ಕಾಡುತ್ತದೆ.
ಚೀನಾ ಅಧ್ಯಕ್ಷರ ಪಕ್ಕದಲ್ಲೇ ಕುಳಿತು ಚೀನಾ ಸೈನಿಕರಿಗೆ ಬಿಸಿ ಮುಟ್ಟಿಸಲು ಸಾಧ್ಯವೆಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂಬುದು ಪ್ರಸಕ್ತ ಚೀನಾ-ಭಾರತ ದ್ವಿಪಕ್ಷೀಯ ಮಾತುಕತೆಯಲ್ಲಿ ಸಾಬೀತಾಗಿದೆ. ಇಷ್ಟಕ್ಕೂ ಮೋದಿ ಮಾಡಿದ್ದೇನೆಂದರೆ ಮೊದಲನೆಯದಾಗಿ ಅತ್ತ 1000ಚೀನಾದ ಸೈನಿಕರು ಲಡಾಕ್ ನಲ್ಲಿ ನುಸುಳುತ್ತಿದ್ದರೆ ಅಷ್ಟೇ ಕ್ಷಿಪ್ರವಾಗಿ ಇತ್ತ 1500 ಭಾರತದ ಸೈನಿಕರನ್ನು ಲಡಾಕ್ ಗೆ ಕಳಿಸಿದ್ದರು. ಅಷ್ಟೂ ಸಾಲದೆಂಬಂತೆ ದ್ವಿಪಕ್ಷೀಯ ಮಾತುಕತೆ ನಡುವೆಯೇ, ಚೀನಾ-ಭಾರತ ವ್ಯಾವಹಾರಿಕ ಸಂಬಂಧ ಸೌಹಾರ್ದಯುತವಾಗಿರಬೇಕಾದರೆ ಗಡಿ ಸಮಸ್ಯೆ ಶೀಘ್ರ ಬಗೆಹರಿಯಲೇ ಬೇಕು ಎಂದು ಚೀನಾ ಅಧ್ಯಕ್ಷರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿ 'ಚೀನಾ ಮೇಲೆ ಒತ್ತಡ ಹೇರಿದ್ದು'.
ಇದಕ್ಕೂ ಮುನ್ನ, ಅಹಮದಾಬಾದ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚೀನಾದ ಅತಿಕ್ರಮಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಂತರ ಚೀನಾ, ಭಾರತದ ಗಡಿ ಪ್ರದೇಶದಲ್ಲಿ ನುಸಿಳಿರುವುದರ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆದ ಸಂದರ್ಭದಲ್ಲೇ ಮೋದಿ ಪ್ರಸ್ತಾಪಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಮುನ್ನವೇ, ತಾವು ಚೀನಾ ಸೈನಿಕರಿಗೆ ಗಡಿ ಬಿಟ್ಟು ತೆರಳುವಂತೆ ಸೂಚಿಸಿದ್ದೇನೆ ಎಂದು ಮೋದಿಗೆ ಚೀನಾ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.
ಒಂದೆಡೆ ಚೀನಾ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯ ಜಮಾವಣೆ, ಮತ್ತೊಂದೆಡೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಕ್ಷಣಾರ್ಧದಲ್ಲಿ ಚೀನಾ ಸೈನಿಕರು ವಾಪಸ್ಸಾಗುವಂತೆ ಮಾಡಿದ್ದರು ನರೇಂದ್ರ ಮೋದಿ. ಭಾರತದ ಗಡಿಯಲ್ಲಿ ಅಪಾರ ಪ್ರಮಾಣದ ಸೈನಿಕರನ್ನು ಜಮಾವಣೆ ಮಾಡುವಂತೆ ಮೋದಿ ಮಾತ್ರ ಅದೇಶ ನೀಡಿರಲು ಸಾಧ್ಯ ಎನ್ನುತ್ತಾರೆ ಮಿಲಿಟರಿ ವಿಶ್ಲೇಷಕ ಮೋಹನ್ ಗುರುಸ್ವಾಮಿ.
ದ್ವಿಪಕ್ಷೀಯ ಮಾತುಕತೆಯ ನಂತರ ಚೀನಾ ಭಾರತದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಒಪ್ಪಿದೆ. ಒಂದು ವೇಳೆ ನರೇಂದ್ರ ಮೋದಿ ಅವರ ಒತ್ತಡಕ್ಕೆ ಮಣಿಯದೇ ಹೋದರೆ ದ್ವಿಪಕ್ಷೀಯ ಸಂಬಂಧ ಹಳ್ಳಹಿಡಿಯುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡ ಚೀನಾ ಕೊನೆಗೂ ಮೋದಿ ಒತ್ತಡಕ್ಕೆ ಮಣಿದಿದೆ.
ಮೋದಿ ಕ್ಸಿ ಜಿನ್ ಪಿಂಗ್ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದಕ್ಕೂ ಮುನ್ನ ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದ ಗಡಿರೇಖೆಯಲ್ಲಿ ಸುಮಾರು 4-5 ಕಿ.ಮೀ ನಷ್ಟು ದೂರುದವರೆಗೆ ಚೀನಾ ಸೇನೆಯ ಸಾವಿರಕ್ಕೂ ಹೆಚ್ಚು ಯೋಧರು ಒಳ ನುಸುಳಿದ್ದರು.
ಗಡಿ ನುಸುಳುವಿಕೆ ಬಗ್ಗೆ ಭಾರತದ ಪ್ರದಾನಿ ಮೋದಿಯವರ ಸ್ಪಷ್ಟ ಹಾಗೂ ದೃಢ ನಿಲುವು ಅಮೆರಿಕ ಸೇರಿದಂತೆ ಅನೇಕ ದೇಶಗಳ ಗಮನ ಸೆಳೆದಿದ್ದು, ಈ ಹಿಂದಿನ ಪ್ರಧಾನಿಗಳಿಗಿಂತ ಅವರು ಭಿನ್ನ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.